ಕೇರಳದಲ್ಲಿ ಬೀದಿ ನಾಯಿಗಳ ಉಪಟಳ | ಜಾಗೃತಿ ಮೂಡಿಸುವ ಬೀದಿ ನಾಟಕದ ವೇಳೆ ನಟನನ್ನೇ ಕಚ್ಚಿದ ಬೀದಿ ನಾಯಿ!

Photo Credit : NDTV
ಕಣ್ಣೂರು: ಬೀದಿ ನಾಯಿಗಳ ಉಪಟಳದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕವಾಡುತ್ತಿದ್ದ ನಟನೊಬ್ಬನನ್ನು ಬೀದಿ ನಾಯಿಯೊಂದು ಕಚ್ಚಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಈ ಘಟನೆಯು ರವಿವಾರ ಕಂದನ್ ಕಾಯಿಯ ಪಿ. ಕೃಷ್ಣಪ್ಪಿಲ ಗ್ರಂಥಾಲಯದಲ್ಲಿ ಪಿ.ರಾಧಾಕೃಷ್ಣನ್ ಎಂಬ ನಟರು ಬೀದಿ ನಾಟಕ ಪ್ರಸ್ತುತಪಡಿಸುವಾಗ ನಡೆದಿದೆ.
ನಾಯಿಯೊಂದು ಅಟ್ಟಿಸಿಕೊಂಡು ಬಂದಾಗ, ಕೋಲಿನೊಂದಿಗೆ ಓಡುತ್ತಿರುವ ದೃಶ್ಯವನ್ನು ಅವರು ಈ ವೇಳೆ ಅಭಿನಯಿಸುತ್ತಿದ್ದರು ಎನ್ನಲಾಗಿದೆ.
ಇದ್ದಕ್ಕಿದ್ದಂತೆ ವೇದಿಕೆಯನ್ನು ಪ್ರವೇಶಿಸಿರುವ ಕಪ್ಪು ನಾಯಿಯೊಂದು ರಾಧಾಕೃಷ್ಣನ್ ಅವರ ಮೇಲೆ ದಾಳಿ ನಡೆಸಿದೆ. ಪ್ರೇಕ್ಷಕರೊಬ್ಬರು ನಾಯಿಯನ್ನು ಓಡಿಸಲು ಚಪ್ಪಲಿಯೊಂದಿಗೆ ಅದರ ಹಿಂದೆ ಬಿದ್ದಾಗ, ಪರಿಸ್ಥಿತಿ ಮತ್ತಷ್ಟು ವಿಷಮಿಸಿದ್ದು, ನಾಯಿಯ ದಾಳಿಯಲ್ಲಿ ರಾಧಾಕೃಷ್ಣನ್ ಕಾಲಿಗೆ ಗಾಯವಾಗಿದೆ.
ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಮೈಕ್ರೊಫೋನ್ ನಲ್ಲಿ ನಾಯಿ ಬೊಗಳುತ್ತಿರುವ ಸದ್ದು ಕೇಳಿ ಬಂದಾಗ, ನಾಯಿ ನಟ ರಾಧಾಕೃಷ್ಣನ್ ಅವರ ಮೇಲೆ ದಾಳಿ ನಡೆಸಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ.
ಹೀಗಿದ್ದರೂ, ನಾಯಿಯ ದಾಳಿಯಲ್ಲಿ ಪುತ್ರಿಯನ್ನು ಕಳೆದುಕೊಂಡ ತಂದೆಯ ಪಾತ್ರ ಮಾಡುವುದನ್ನು ರಾಧಾಕೃಷ್ಣನ್ ಮುಂದುವರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಬೀದಿp ನಾಯಿಗಳ ಉಪಟಳ ಮಿತಿಮೀರಿದ್ದು, ಅವುಗಳ ಸಾಮೂಹಿಕ ಹತ್ಯೆಗೆ ಸಾರ್ವಜನಿಕ ಒತ್ತಡ ಹೆಚ್ಚುತ್ತಿದೆ. ಈ ಕುರಿತು ಜಾಗೃತಿ ಅಭಿಯಾನಗಳೂ ವ್ಯಾಪಕವಾಗಿ ನಡೆಯುತ್ತಿವೆ.







