“ನೀವು ಹೊರೆ ಹೊತ್ತುಕೊಳ್ಳಬೇಡಿ”: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತ ಕ್ಯಾಪ್ಟನ್ ತಂದೆಗೆ ಸುಪ್ರೀಂ ಕೋರ್ಟ್ ಸಾಂತ್ವಾನ

Photo credit: PTI
ಹೊಸದಿಲ್ಲಿ : ಅಹ್ಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ನಿಮ್ಮ ಮಗನನ್ನು ದೂಷಿಸಬಾರದು, ನೀವು ಅನಗತ್ಯವಾಗಿ ನಿಮ್ಮ ಮೇಲೆ ಹೊರೆ ಹೊತ್ತುಕೊಳ್ಳಬೇಡಿ ಎಂದು ಮೃತ ಪೈಲಟ್ ಕ್ಯಾ.ಸುಮೀತ್ ಸಭರ್ವಾಲ್ ಅವರ ತಂದೆ ಪುಷ್ಕರಾಜ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಾಂತ್ವಾನ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು, "ನೀವು ನಿಮ್ಮ ಮೇಲೆ ಹೊರೆ ಹೊತ್ತುಕೊಳ್ಳಬಾರದು. ವಿಮಾನ ಅಪಘಾತಕ್ಕೆ ಪೈಲಟ್ ಅವರನ್ನು ದೂಷಿಸಬಾರದು. ಇದು ಅಪಘಾತ, ಪ್ರಾಥಮಿಕ ವರದಿಯಲ್ಲಿಯೂ ಕೂಡ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ" ಎಂದು 91ರ ಹರೆಯದ ಪುಷ್ಕರಾಜ್ ಅವರಿಗೆ ಹೇಳಿದೆ.
ಪುಷ್ಕರಾಜ್ ಸಭರ್ವಾಲ್ ಅವರ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ಕ್ಕೆ ನೋಟಿಸ್ ನೀಡಿದೆ.
ಪುಷ್ಕರಾಜ್ ಸಭರ್ವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಪೈಲಟ್ ಸುಮೀತ್ ಸಭರ್ವಾಲ್ ಬಗ್ಗೆ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿರುವ ವರದಿ ಬಗ್ಗೆ ಪೀಠದ ಗಮನಕ್ಕೆ ತಂದಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯು ಭಾರತವನ್ನು ದೂಷಿಸಲು ಮಾಡಿದ್ದ ಅಸಹ್ಯಕರ ವರದಿಯಾಗಿತ್ತು ಎಂದು ಪೀಠವು ಹೇಳಿದೆ. ಈ ಕುರಿತು ಮುಂದಿನ ವಿಚಾರಣೆಯನ್ನು ನವೆಂಬರ್ 10ಕ್ಕೆ ನ್ಯಾಯಾಲಯ ಮುಂದೂಡಿದೆ.
ಜೂನ್ 12ರಂದು ಅಹ್ಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಕರು, ಸಿಬ್ಬಂದಿಗಳು ಸೇರಿದಂತೆ 260 ಮಂದಿ ಮೃತಪಟ್ಟಿದ್ದರು.







