ಚತ್ತೀಸ್ ಗಢ: ಬಂದೂಕಿನಿಂದ ಆಕಸ್ಮಿಕ ಗುಂಡು ಸಿಡಿದು ಡಿಆರ್ಜಿ ಯೋಧ ಸಾವು

Photo: AI generated
ನಾರಾಯಣಪುರ: ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಓರ್ವ ಮೃತಪಟ್ಟಿರುವ ಘಟನೆ ಚತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ರವಿವಾರ ನಡೆದಿದೆ.
ನಕ್ಸಲೈಟ್ ಪ್ರಭಾವಿತ ಛೋಟೆ ಡಂಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ‘‘ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಾರ್ಯಾಚರಣೆ’’ಯಿಂದ ಭದ್ರತಾ ಸಿಬ್ಬಂದಿಯ ತಂಡ ಹಿಂದೆ ಬಂದಾಗ ಕಡೇನರ್ ಶಿಬಿರದಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಸ್ತು ತಂಡ ಮುಂಜಾನೆ ಶಿಬಿರಕ್ಕೆ ತಲುಪಿತು. ಅನಂತರ ಭದ್ರತಾ ಸಿಬ್ಬಂದಿ ವಾಹನವನ್ನು ಏರುವಾಗ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿಯಿತು ಎಂದು ಅವರು ತಿಳಿಸಿದ್ದಾರೆ.
ಇದರಿಂದ ಕಾನ್ಸ್ಟೆಬಲ್ ಬಲ್ದೇವ್ ಸಿಂಗ್ ಹುರ್ರಾ (33) ತೀವ್ರ ಗಾಯಗೊಂಡರು. ಅವರನ್ನು ಕೂಡಲೇ ಧೌದಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟರು ಎಂದು ಅಧಿಕಾರಿ ತಿಳಿಸಿದ್ದಾರೆ.
ಆಗಸ್ಮಿಕ ಗುಂಡು ಸಿಡಿದ ಬಂದೂಕು ಯೋಧನದ್ದೇ ಅಥವಾ ಸಹೋದ್ಯೋಗಿಗಳದ್ದೇ ಎಂದು ಪೊಲೀಸರು ದೃಢಪಡಿಸಿಲ್ಲ.





