ಬಿಜೆಪಿ ಪ್ರಣಾಳಿಕೆಯನ್ನು ರೈತರು ನಂಬುವುದಿಲ್ಲ: ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್ | PC: PTI
ಹೊಸದಿಲ್ಲಿ: ಬಿಜೆಪಿಯ 2024ರ ಲೋಕಸಭೆ ಚುನಾವಣಾ ಪ್ರಣಾಳಿಕೆಯನ್ನು ರೈತರು ನಂಬುವುದಿಲ್ಲ ಎಂದು ಭಾರತೀಯ ರೈತ ಒಕ್ಕೂಟ(ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಅವರು ಪಿಟಿಐಗೆ ನೀಡಿದ ಸಂದರ್ಶನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಬಂಡವಾಳಶಾಹಿಗಳ ಅಣತಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ರಾಜಕೀಯ ಪಕ್ಷಗಳನ್ನು ವಶಪಡಿಸಿಕೊಂಡಿರುವ ಬಂಡವಾಳಶಾಹಿಗಳ ಗುಂಪು ಎಂದು ಅವರು ಹೇಳಿದರು.
ಭಾರತವನ್ನು ಅಗ್ಗದ ಕಾರ್ಮಿಕರ ಮೂಲವಾಗಿ ನೋಡಲಾಗುತ್ತದೆ. ಸರಕಾರದ ಮೇಲಿನ ಕಾರ್ಪೋರೇಟ್ ನ ನಿಯಂತ್ರಣ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು.
‘‘ನಾವು ಪ್ರಣಾಳಿಕೆಯನ್ನು ನಂಬುವುದಿಲ್ಲ. 2014ರ ಪ್ರಣಾಳಿಕೆಯಲ್ಲೂ ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಲಾಗಿತ್ತು. 10 ವರ್ಷಗಳು ಕಳೆದರು ಶಿಫಾರಸು ಜಾರಿಯಾಗಿಲ್ಲ’’ ಎಂದು ಅವರು ಹೇಳಿದರು.
ಅವರು (ಬಿಜೆಪಿ) ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಎ2+ಎಫ್ಎಲ್ ಫಾರ್ಮುಲಾವನ್ನು ಬಳಸುತ್ತಿದ್ದಾರೆ ಹಾಗೂ ‘‘ನಾವು ಶಿಫಾರಸನ್ನು ಅನುಷ್ಠಾನಗೊಳಿಸಿದ್ದೇವೆ’’ ಎಂದು ಹೇಳುತ್ತಿದ್ದಾರೆ ಎಂದು ಟಿಕಾಯತ್ ತಿಳಿಸಿದರು.