ಸಿಖ್ ಮತ್ತು ಲಡಾಖ್ ರೆಜಿಮೆಂಟಲ್ ಕೇಂದ್ರಗಳಲ್ಲಿ ತರಬೇತಿ ಪೂರ್ಣಗೊಳಿಸಿ ರಾಷ್ಟ್ರಸೇವೆಗೆ ಸಜ್ಜಾದ ಮೊದಲ ಅಗ್ನಿವೀರ ತಂಡಗಳು
![ಸಿಖ್ ಮತ್ತು ಲಡಾಖ್ ರೆಜಿಮೆಂಟಲ್ ಕೇಂದ್ರಗಳಲ್ಲಿ ತರಬೇತಿ ಪೂರ್ಣಗೊಳಿಸಿ ರಾಷ್ಟ್ರಸೇವೆಗೆ ಸಜ್ಜಾದ ಮೊದಲ ಅಗ್ನಿವೀರ ತಂಡಗಳು ಸಿಖ್ ಮತ್ತು ಲಡಾಖ್ ರೆಜಿಮೆಂಟಲ್ ಕೇಂದ್ರಗಳಲ್ಲಿ ತರಬೇತಿ ಪೂರ್ಣಗೊಳಿಸಿ ರಾಷ್ಟ್ರಸೇವೆಗೆ ಸಜ್ಜಾದ ಮೊದಲ ಅಗ್ನಿವೀರ ತಂಡಗಳು](https://www.varthabharati.in/h-upload/2023/08/06/1177659-whatsapp-image-2023-08-06-at-92101-pm.webp)
ಹೊಸದಿಲ್ಲಿ: ಜಾರ್ಖಂಡ್ ನ ರಾಮಗಡದ ಸಿಖ್ ರೆಜಿಮೆಂಟಲ್ ಕೇಂದ್ರದಲ್ಲಿ 520 ಅಗ್ನಿವೀರರ ಮೊದಲ ತಂಡವು ಕಠಿಣ ಮಿಲಿಟರಿ ತರಬೇತಿಯನ್ನು ಪೂರ್ಣಗೊಳಿಸಿ ರಾಷ್ಟ್ರಸೇವೆಗೆ ಸಜ್ಜಾಗಿದೆ. ಇದೇ ವೇಳೆ ಲೇಹ್ನಲ್ಲಿರುವ ಲಡಾಖ್ ಸ್ಕೌಟ್ಸ್ ರೆಜಿಮೆಂಟಲ್ ಕೇಂದ್ರದಿಂದ 141 ಅಗ್ನಿವೀರರು ಮತ್ತು ಜೈಪುರದಲ್ಲಿಯ 61 ಅಶ್ವದಳದಿಂದ 40 ಅಗ್ನಿವೀರರ ಮೊದಲ ತಂಡಗಳೂ ಯಶಸ್ವಿಯಾಗಿ ಹೊರಹೊಮ್ಮಿವೆ.
ಆಯಾ ಕೇಂದ್ರಗಳಲ್ಲಿ ಅಗ್ನಿವೀರರ ಪಾಸಿಂಗ್ ಔಟ್ ಪರೇಡ್ಗಳು ನಡೆದವು. ರೆಜಿಮೆಂಟ್ಲ್ ಕೇಂದ್ರಗಳ ಮುಖ್ಯಸ್ಥರು, ಅಗ್ನಿವೀರರ ಕುಟುಂಬ ಸದಸ್ಯರು, ಬೋಧಕ ಸಿಬ್ಬಂದಿ ಮತ್ತು ಅತಿಥಿಗಳು ಸಾಂಪ್ರದಾಯಕ ಪರೇಡ್ ಗಳನ್ನು ವೀಕ್ಷಿಸಿದರು. ಪರೇಡ್ ಬಳಿಕ ಕಸಮ್ (ಶಪಥ) ಪರೇಡ್ ಮತ್ತು ಎಲ್ಲ ಯೋಧರಿಗೆ ಗೌರವ ಪದಕ ಪ್ರದಾನ ಕಾರ್ಯಕ್ರಮಗಳೂ ನಡೆದವು.
ಸರಕಾರವು 2022, ಜೂ.14ರಂದು ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಅಗ್ನಿಪಥ ಯೋಜನೆಯನ್ನು ಪ್ರಕಟಿಸಿತ್ತು. ಭಾರತೀಯ ಸೇನೆಯಲ್ಲಿ ಈಗಾಗಲೇ 40,000 ಅಗ್ನಿವೀರರು ಸೇರ್ಪಡೆಗೊಂಡಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಯೋಧರು, ನಾವಿಕರು ಮತ್ತು ಏರ್ಮನ್ ಗಳ ಎಲ್ಲ ಹುದ್ದೆಗಳಿಗೆ ಈಗ ಅಗ್ನಿಪಥ ಯೋಜನೆಯಡಿಯೇ ನೇಮಕಾತಿಗಳು ನಡೆಯುತ್ತಿವೆ.