ನಾನು ಕರ್ತವ್ಯವನ್ನು ಯಾವಾಗಲೂ ಮೊದಲು ಎಂದು ಭಾವಿಸುತ್ತೇನೆ : ರಾಜೀನಾಮೆ ಬಳಿಕ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೊದಲ ಸಾರ್ವಜನಿಕ ಭಾಷಣ

Photo | PTI
ಭೋಪಾಲ್, ನ.21: ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಲ್ಕು ತಿಂಗಳ ಹಿಂದೆ ರಾಜೀನಾಮೆ ನೀಡಿ ರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದ ಜಗದೀಪ್ ಧನಕರ್, ಶುಕ್ರವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತಾಡಿದರು. ಭೋಪಾಲ್ನಲ್ಲಿ ಹಿರಿಯ ಆರೆಸ್ಸೆಸ್ ಕಾರ್ಯಕರ್ತ ಮನಮೋಹನ್ ವೈದ್ಯ ರಚಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಧನಕರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಗದೀಪ್ ಧನಕರ್, “ನಾನು ಕರ್ತವ್ಯವನ್ನು ಯಾವಾಗಲೂ ಮೊದಲು ಎಂದು ಭಾವಿಸುತ್ತೇನೆ, ನನ್ನ ಇತ್ತೀಚಿನ ವೃತ್ತಿಜೀವನವೇ ಅದಕ್ಕೆ ಸಾಕ್ಷಿ” ಎಂದು ಹೇಳಿದರು. ಭಾಷಣ ಮುಂದುವರಿಯುತ್ತಿದ್ದಂತೆಯೇ ಒಬ್ಬರು ಸಂಜೆ 7.30ಕ್ಕೆ ದಿಲ್ಲಿಗೆ ಹಿಂತಿರುಗುವ ವಿಮಾನ ಸಮಯವನ್ನು ಅವರಿಗೆ ನೆನಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಧನಕರ್, “ವಿಮಾನ ಹತ್ತಬೇಕಾದರೂ, ಅದರ ಕಾರಣಕ್ಕೆ ಕರ್ತವ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು.
ಪುಸ್ತಕದ ವಿಷಯವನ್ನು ಉಲ್ಲೇಖಿಸಿದ ಅವರು, ಆರೆಸ್ಸೆಸ್ ಅನ್ನು ತೀವ್ರ ಬಲಪಂಥೀಯ ಸಂಘಟನೆಯಾಗಿ ಬಿಂಬಿಸುವ ಮತ್ತು ಅದನ್ನು ಮಹಾತ್ಮ ಗಾಂಧಿಯವರ ಹತ್ಯೆಗೆ ಲಿಂಕ್ ಮಾಡಲು ಪ್ರಯತ್ನಿಸುವುದು “ಆಧಾರರಹಿತ ಪ್ರಚಾರ” ಎಂದು ಹೇಳಿದರು. ಸಂಘದ ತತ್ವ, ಚಿಂತನೆ ಹಾಗೂ ಪಾತ್ರವನ್ನು ತಪ್ಪಾಗಿ ವಿಕೃತಗೊಳಿಸಲು ನಡೆಯುತ್ತಿರುವ ಯತ್ನಗಳನ್ನು ಅವರು ಟೀಕಿಸಿದರು.





