ಗೋಧ್ರಾ ರೈಲು ಹತ್ಯಾಕಾಂಡ: ಪೆರೋಲ್ ಪಡೆದು ತಲೆಮರೆಸಿಕೊಂಡಿದ್ದ ಅಪರಾಧಿ ವರ್ಷದ ಬಳಿಕ ಬಂಧನ

Image Source : PTI
ಅಹ್ಮದಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ 2002ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ತನ್ನ ಪಾತ್ರಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಳೆದ ವರ್ಷ ಪೆರೋಲ್ ನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ಅಪರಾಧಿ ಸತ್ತಾರ್ ಎಂಬಾತ ಕೊನೆಗೂ ಗುಜರಾತಿನ ಪಂಚಮಹಲ್ ಜಿಲ್ಲೆಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸತ್ತಾರ್ ಲಿಮ್ಖೇಡಾದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬ ಮಾಹಿತಿಯ ಮೇರೆಗೆ ಕ್ಷಿಪ್ರ ಕಾರ್ಯಾಚರಣೆಗಿಳಿದ ವಿಶೇಷ ದಳವು ಶನಿವಾರ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆತನನ್ನು ಅಹ್ಮದಾಬಾದ್ನ ಸಾಬರಮತಿ ಸೆಂಟ್ರಲ್ ಜೈಲಿಗೆ ರವಾನಿಸಲಾಗಿದ್ದು,ತನ್ನ ಶಿಕ್ಷೆಯ ಉಳಿದ ಅವಧಿಯನ್ನು ಅಲ್ಲಿ ಅನುಭವಿಸಲಿದ್ದಾನೆ.
ಮಾರ್ಚ್ 2022ರಲ್ಲಿ ಬಂಧಿಸಲ್ಪಟ್ಟಿದ್ದ ಸತ್ತಾರ್ ವಿರುದ್ಧ ಕೊಲೆ,ಕೊಲೆಯತ್ನ,ಢಕಾಯಿತಿ ಇತ್ಯಾದಿ ಸೇರಿದಂತೆ ಐಪಿಸಿ,ರೈಲ್ವೆ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿ ತಡೆ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿತ್ತು.
ರೈಲು ಬೋಗಿಗೆ ಬೆಂಕಿ ಹಚ್ಚಿದ್ದ ಘಟನೆಗೆ ಸಂಬಂಧಿಸಿದಂತೆ 2011ರಲ್ಲಿ ವಿಶೇಷ ನ್ಯಾಯಾಲಯವು 11 ಜನರಿಗೆ ಮರಣ ದಂಡನೆ ಮತ್ತು ಇತರ 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಆರು ವರ್ಷಗಳ ಬಳಿಕ ಗುಜರಾತ ಉಚ್ಚ ನ್ಯಾಯಾಲಯವು 11 ಜನರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿತ್ತು ಮತ್ತು ಇತರ 20 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.







