ಗ್ರಹಾಂ ಸ್ಟೇನ್ಸ್, ಇಬ್ಬರು ಅಪ್ರಾಪ್ತ ಮಕ್ಕಳ ಕೊಲೆ ಪ್ರಕರಣ : ʼಉತ್ತಮ ನಡವಳಿಕೆʼ ಆಧಾರದ ಮೇಲೆ ಓರ್ವ ಅಪರಾಧಿ ಜೈಲಿನಿಂದ ಬಿಡುಗಡೆ
ಅಪರಾಧಿಗೆ ʼಜೈಶ್ರೀರಾಮ್ʼ ಘೋಷಣೆ ಕೂಗಿ ಸ್ವಾಗತ!

ಮಹೇಂದ್ರ ಹೆಂಬ್ರಾಮ್ (Photo: X/@OrissaPOSTLive)
ಹೊಸದಿಲ್ಲಿ : 1999ರಲ್ಲಿ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಅಪ್ರಾಪ್ತ ಪುತ್ರರ ಹತ್ಯೆಗೆ ಸಂಬಂಧಿಸಿ ಶಿಕ್ಷೆಗೆ ಗುರಿಯಾಗಿದ್ದ ಓರ್ವ ಅಪರಧಿಯನ್ನು ʼಉತ್ತಮ ನಡವಳಿಕೆʼ ಆಧಾರದ ಮೇಲೆ ಒಡಿಶಾದ ಜೈಲಿನಿಂದ ಬುಧವಾರ ಬಿಡುಗಡೆ ಮಾಡಲಾಗಿದೆ.
ಮಹೇಂದ್ರ ಹೆಂಬ್ರಾಮ್ 25 ವರ್ಷಗಳ ಜೈಲು ಶಿಕ್ಷೆ ಬಳಿಕ ಒಡಿಶಾದ ಕಿಯೋಂಜಾರ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆತನನ್ನು "ಜೈ ಶ್ರೀ ರಾಮ್" ಘೋಷಣೆಗಳನ್ನು ಕೂಗುವ ಮೂಲಕ ಹಾರ ಹಾಕಿ ಕೆಲವರು ಸ್ವಾಗತಿಸಿದರು.
ʼಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಘಟನೆಯಲ್ಲಿ ತಪ್ಪಾಗಿ ಸಿಲುಕಿ ನಾನು 25 ವರ್ಷ ಜೈಲಿನಲ್ಲಿ ಕಳೆದಿದ್ದೇನೆ. ಇಂದು ನಾನು ಬಿಡುಗಡೆಯಾಗಿದ್ದೇನೆʼ ಎಂದು ಹೆಂಬ್ರಾಮ್ ಬಿಡುಗಡೆಯ ನಂತರ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
1999ರ ಜನವರಿ 22ರಂದು ಒಡಿಶಾದಲ್ಲಿ ಬಜರಂಗದಳದ ಸದಸ್ಯ ದಾರಾ ಸಿಂಗ್ ನೇತೃತ್ವದ ತಂಡ ಜೀಪಿನಲ್ಲಿ ಮಲಗಿದ್ದ ಕುಷ್ಠರೋಗ ಸಂತ್ರಸ್ತರ ಸೇವೆ ಮಾಡುತ್ತಿದ್ದ ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳಾದ ಫಿಲಿಪ್ (10) ಮತ್ತು ತಿಮೋತಿ(6) ಅವರನ್ನು ಜೀವಂತ ಸುಟ್ಟು ಹಾಕಿತ್ತು.
(ಗ್ರಹಾಂ ಸ್ಟೇನ್ಸ್ ಕುಟುಂಬ)
ಪ್ರಕರಣದಲ್ಲಿ ದಾರಾ ಸಿಂಗ್ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.







