ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರ ಹೇರಲು ವಿ.ಡಿ.ಸಾವರ್ಕರ್ ಮೊಮ್ಮಗ ಕರೆ
ಹೊಸದಿಲ್ಲಿ: ಮುಸ್ಲಿಂ ಸಮುದಾಯದ ಮೇಲೆ ಆರ್ಥಿಕ ಬಹಿಷ್ಕಾರ ಹೇರಬೇಕು ಹಾಗೂ ಹಿಂದೂಗಳು ತಮ್ಮೊಂದಿಗೇ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಪ್ರಮುಖ ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಹಿಂದೂಗಳಿಗೆ ವಿವಾದಾತ್ಮಕ ಕರೆ ನೀಡಿದ್ದಾರೆ.
![ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರ ಹೇರಲು ವಿ.ಡಿ.ಸಾವರ್ಕರ್ ಮೊಮ್ಮಗ ಕರೆ ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರ ಹೇರಲು ವಿ.ಡಿ.ಸಾವರ್ಕರ್ ಮೊಮ್ಮಗ ಕರೆ](https://www.varthabharati.in/h-upload/2023/06/18/1153702-ranjitsavarkaranivb53.webp)
ಹೊಸದಿಲ್ಲಿ: ಮುಸ್ಲಿಂ ಸಮುದಾಯದ ಮೇಲೆ ಆರ್ಥಿಕ ಬಹಿಷ್ಕಾರ ಹೇರಬೇಕು ಹಾಗೂ ಹಿಂದೂಗಳು ತಮ್ಮೊಂದಿಗೇ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಪ್ರಮುಖ ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಹಿಂದೂಗಳಿಗೆ ವಿವಾದಾತ್ಮಕ ಕರೆ ನೀಡಿದ್ದಾರೆ. ಗೋವಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರು ದಿನಗಳ 'ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ' ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಇಂತಹ ಹೇಳಿಕೆ ನೀಡಿದ್ದಾರೆ.
ಹಲವು ಮಾನವ ಹಕ್ಕು ಕಾರ್ಯಕರ್ತರ ಹತ್ಯೆಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಉಗ್ರವಾದಿ ಹಿಂದುತ್ವ ಗುಂಪಾದ ಸನಾತನ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ಹಿಂದೂ ಜನಜಾಗೃತಿ ಸಮಿತಿ ಸಂಘಟನೆಯು ಈ ಕಾರ್ಯಕ್ರಮ ಆಯೋಜಿಸಿತ್ತು ಎಂದು Indian Express ವರದಿ ಮಾಡಿದೆ.
ಮುಸ್ಲಿಂ ಮಾಂಸ ವ್ಯಾಪಾರಿಗಳಿಗೆ ಆರ್ಥಿಕ ಸಹಾಯವಾಗುವುದನ್ನು ತಪ್ಪಿಸಲು ಹಿಂದೂಗಳ ಆಹಾರ ಪದ್ಧತಿಯ ಆದ್ಯತೆಯಾದ ಜಟ್ಕಾ ಮಾಂಸಾಹಾರವನ್ನು ಸೇವಿಸುವಂತೆ ಹಿಂದೂ ಧಾರ್ಮಿಕ ನಾಯಕರು ತಮ್ಮ ಅನುಯಾಯಿಗಳನ್ನು ಪ್ರೋತ್ಸಾಹಿಸಬೇಕು ಎಂದೂ ರಂಜಿತ್ ಸಾವರ್ಕರ್ ಆಗ್ರಹಿಸಿದ್ದಾರೆ.
"ನಾವು ಇಸ್ಲಾಂನೊಂದಿಗೆ ವ್ಯವಹರಿಸುವುದಿಲ್ಲ. ನಮ್ಮ ವ್ಯವಹಾರ ಹಿಂದೂಗಳೊಂದಿಗೆ ಮಾತ್ರ" ಎಂಬ ಘೋಷವಾಕ್ಯದೊಂದಿಗೆ ಹಿಂದೂ ಸಮುದಾಯದೊಳಗೇ ವ್ಯವಹರಿಸುವಂಥ ಅಭಿಯಾನವನ್ನು ಉತ್ತೇಜಿಸಬೇಕು ಎಂದೂ ಪ್ರತಿಪಾದಿಸಿದ್ದಾರೆ. ವಿ.ಡಿ.ಸಾವರ್ಕರ್ ಅವರನ್ನು ಹಿಂದೂ ರಾಷ್ಟ್ರೀಯತಾವಾದ ಚಳವಳಿಯು ಮುಖ್ಯ ನೇತಾರ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.