ಶಿಕ್ಷೆ ಇಲ್ಲದೇ ಮಹಿಳೆಯರಿಗೆ ಒಂದು ಕೊಲೆ ಮಾಡಲು ಅವಕಾಶ ನೀಡಿ: ರಾಷ್ಟ್ರಪತಿಗೆ ಪತ್ರ ಬರೆದ ಎನ್ಸಿಪಿ ನಾಯಕಿ ರೋಹಿಣಿ ಖಡ್ಸೆ

ರೋಹಿಣಿ ಖಡ್ಸೆ / ರಾಷ್ಟ್ರಪತಿ ದ್ರೌಪದಿ ಮುರ್ಮು (Photo credit: X/@Rohini_khadse, @rashtrapatibhvn)
ಹೊಸದಿಲ್ಲಿ : ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧದ ದೃಷ್ಟಿಯಿಂದ ಶಿಕ್ಷೆ ಇಲ್ಲದೇ ಮಹಿಳೆಯರಿಗೆ ಒಂದು ಕೊಲೆ ಮಾಡಲು ಅವಕಾಶ ನೀಡುವಂತೆ ಶರದ್ ಪವಾರ್ ನೇತೃತ್ವದ ಎನ್ಸಿಪಿಯ ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ ಖಡ್ಸೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ, ಭಾರತದಲ್ಲಿ ದಬ್ಬಾಳಿಕೆಯ ಮನಸ್ಥಿತಿ, ಅತ್ಯಾಚಾರಿ ಮನಸ್ಥಿತಿ ಮತ್ತು ನಿಷ್ಕ್ರಿಯ ಕಾನೂನು ಮತ್ತು ಸುವ್ಯವಸ್ಥೆಯ ಪ್ರವೃತ್ತಿಯನ್ನು ಕೊನೆಗಾಣಿಸಲು ಮಹಿಳೆಯರು ಬಯಸುತ್ತಿದ್ದಾರೆ ಎಂದು ಹೇಳಿದರು.
ಮುಂಬೈನಲ್ಲಿ 12 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ರೋಹಿಣಿ ಖಡ್ಸೆ, ಈ ಘಟನೆ ಎರಡು ದಿನಗಳ ಹಿಂದೆ ಮುಂಬೈನಲ್ಲಿ ಸಂಭವಿಸಿದೆ. ದೇಶದಾದ್ಯಂತ ಪರಿಸ್ಥಿತಿ ಹೇಗಿದೆ ಎಂದು ಯೋಚಿಸಿ. ವಿಶ್ವ ಜನಸಂಖ್ಯಾ ಪರಿಶೀಲನಾ ಸಮೀಕ್ಷೆ ಪ್ರಕಾರ, ಏಷ್ಯಾದಲ್ಲಿ ಮಹಿಳೆಯರಿಗೆ ಅವರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಭಾರತವು ಅತ್ಯಂತ ಅಸುರಕ್ಷಿತ ರಾಷ್ಟ್ರವಾಗಿದೆ. ಮಹಿಳೆಯರ ಅಪಹರಣ, ಮಹಿಳೆಯರ ನಾಪತ್ತೆ, ಕೌಟುಂಬಿಕ ದೌರ್ಜನ್ಯ ಮತ್ತಿತರ ವಿಷಯಗಳ ಕುರಿತು ಸಮೀಕ್ಷೆಯಲ್ಲಿ ಮಾಹಿತಿ ಇದೆ. ಸನ್ನಿವೇಶವನ್ನು ಗಮನಿಸಿದರೆ, ಒಂದು ಕೊಲೆ ಮಾಡಲು ನಮಗೆ ವಿನಾಯಿತಿ ನೀಡುವಂತೆ ನಾವು ಎಲ್ಲಾ ಮಹಿಳೆಯರ ಪರವಾಗಿ ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ದೇಶದಲ್ಲಿ ಮಹಿಳೆಯರು ದುರ್ಬಲರಾಗಿದ್ದಾರೆ. ಏಕೆಂದರೆ ಅವರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಾರಾಣಿ ತಾರಾ ರಾಣಿ ಮತ್ತು ಅಹಲ್ಯಾ ದೇವಿ ಹೋಳ್ಕರ್ ಅವರು ನಮ್ಮ ತಾಯ್ನಾಡನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡರು. ನಮ್ಮ ಸಮಾಜವನ್ನು ಸುಧಾರಿಸಲು ನಾವು ಮುಂದೆ ಬರಬೇಕು ಎಂದು ಹೇಳಿದ್ದಾರೆ.







