ದೇಶಾದ್ಯಂತ ಎಲ್ಲಾ ಬಂದರುಗಳಲ್ಲಿ ಕಟ್ಟೆಚ್ಚರ; ಭದ್ರತಾ ವ್ಯವಸ್ಥೆ ಬಿಗಿ

ಸಾಂದರ್ಭಿಕ ಚಿತ್ರ | PC : PTI
ಮುಂಬೈ: ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷಾವಸ್ಥೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಹಡಗುಗಾರಿಕೆ ಮಹಾನಿರ್ದೇಶನಾಲಯವು ಭಾರತದ ನಾಗರಿಕ ವಾಯುಯಾನ ಕುರಿತ ಮಹಾನಿರ್ದೇಶನಾಲಯವು (ಡಿಜಿಸಿಎ) ದೇಶಾದ್ಯಂತ ಎಲ್ಲಾ ಬಂದರುಗಳು, ಟರ್ಮಿನಲ್ಗಳು, ಹಡಗುಕಟ್ಟೆಗಳು (ಶಿಪ್ಯಾರ್ಡ್ಗಳು) ಹಾಗೂ ಹಡಗುಗಳಿಗೆ ಭದ್ರತಾ ಏರ್ಪಾಡುಗಳನ್ನು ಬಿಗಿಗೊಳಿಸುವಂತೆ ಆದೇಶಿಸಿದೆ.
ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ವ್ಯವಸ್ಥೆಗಳ ಭದ್ರತೆಯನ್ನು ಪರಾಮರ್ಶಿಸುವಂತೆ ಹಾಗೂ ಸಂವಹನ ವ್ಯವಸ್ಥೆಗಳ ಪರಾಮರ್ಶೆ ನಡೆಸುವಂತೆ ಹಾಗೂ ಸೈಬರ್ ದಾಳಿಗಳ ಬೆದರಿಕೆಗಳನ್ನು ತಡೆಗಟ್ಟಲು ಅಥವಾ ತಗ್ಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಬಂದರುಗಳು ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (ಸಿಐಎಸ್ಓ)ಯವರನ್ನು ಡಿಜಿಸಿಎ ಕೇಳಿಕೊಂಡಿದೆ.
ದೇಶಾದ್ಯಂತ ಎಲ್ಲಾ ಬಂದರುಗಳು ಹಾಗೂ ಹಡಗುಗಳ ಭದ್ರತಾ ವ್ಯವಸ್ಥೆಯನ್ನು ಮಾರ್ಸೆಕ್ ಲೆವೆಲ್-1ರಿಂದ ಮಾರ್ಸೆಕ್ ಲೆವೆಲ್-2ಗೆ ಏರಿಸಲಾಗಿದೆ.
ದೇಶದ ಸಾಗರಪ್ರದೇಶದ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ದೇಶನವನ್ನು ಹೊರಡಿಸಲಾಗಿದ್ದು, ಅದನ್ನು ಅತ್ಯಂತ ತುರ್ತಾಗಿ ಹಾಗೂ ಆದ್ಯತೆಯ ನೆಲೆಯಲ್ಲಿ ಪರಿಗಣಿಸಬೇಕು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ನಿರ್ದೇಶನಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಉಪ ನಾವಿಕ ಸಲಹೆಗಾರ ಹಾಗೂ ಹಿರಿಯ ಉಪ ಮಹಾನಿರ್ದೇಶಕ (ತಂತ್ರಜ್ಞಾನ) ಕ್ಯಾಪ್ಟನ್ ನಿತಿನ್ ಮುಕೇಶ್ ಅವರು ತಿಳಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದ ಕರಾವಳಿ, ಬಂದರುಗಳು, ಟರ್ಮಿನಲ್ಗಳು ಹಾಗೂ ನೌಕೆಗಳಿಗೆ ಸಂಬಾವ್ಯ ಬೆದರಿಕೆಗಳು ಉಂಟಾಗಿರುವುದರಿಂದ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ’’ ಎಂದು ಆದೇಶವು ತಿಳಿಸಿದೆ.