ಮಹುವಾ ಮೊಯಿತ್ರಾ, ದರ್ಶನ್ ಹೀರಾನಂದಾನಿ ವಿರುದ್ದ ಈಡಿಯಿಂದ ಅಕ್ರಮ ವರ್ಗಾವಣೆ ಪ್ರಕರಣ ದಾಖಲು
![ಮಹುವಾ ಮೊಯಿತ್ರಾ, ದರ್ಶನ್ ಹೀರಾನಂದಾನಿ ವಿರುದ್ದ ಈಡಿಯಿಂದ ಅಕ್ರಮ ವರ್ಗಾವಣೆ ಪ್ರಕರಣ ದಾಖಲು ಮಹುವಾ ಮೊಯಿತ್ರಾ, ದರ್ಶನ್ ಹೀರಾನಂದಾನಿ ವಿರುದ್ದ ಈಡಿಯಿಂದ ಅಕ್ರಮ ವರ್ಗಾವಣೆ ಪ್ರಕರಣ ದಾಖಲು](https://www.varthabharati.in/h-upload/2024/04/02/1257967-9.webp)
ಮಹುವಾ ಮೊಯಿತ್ರಾ | Photo: PTI
ಹೊಸದಿಲ್ಲಿ : ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಹಾಗೂ ಉದ್ಯಮಿ ದರ್ಶನ್ ಹೀರಾನಂದಾನಿ ವಿರುದ್ಧ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.
ಸಿಬಿಐ ದೂರನ್ನು ಪರಿಗಣನೆಗೆ ತೆಗೆದುಕೊಂಡು ಮಹುವಾ ಮೊಯಿತ್ರಾ ಹಾಗೂ ದರ್ಶನ್ ಹೀರಾನಂದಾನಿ ಅವರ ವಿರುದ್ಧ ಪೊಲೀಸ್ ಪ್ರಥಮ ಮಾಹಿತಿ ವರದಿಗೆ ಸಮಾನವಾಗಿರುವ ಇಸಿಐಆರ್ ಅನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ. ಜಾರಿ ನಿರ್ದೇಶನಾಲಯ ಎರಡು ಮೂರು ದಿನಗಳಿಗೆ ಹಿಂದೆ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ)ಯ ಸಿವಿಲ್ ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ತನಿಖೆ ನಡೆಸುತ್ತಿದೆ. ಅಲ್ಲದೆ, ಈ ಪ್ರಕರಣದಲ್ಲಿ ಮಹುವಾ ಮೊಯಿತ್ರಾ ಹಾಗೂ ಹೀರಾನಂದಾನಿ ಅವರನ್ನು ವಿಚಾರಣೆಗೆ ಕರೆದಿತ್ತು. ಆದರೆ, ಅವರು ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ.
ಎಫ್ಐಆರ್ ದಾಖಲಿಸಿದ ಬಳಿಕ ಸಿಬಿಐ ಕಳೆದ ತಿಂಗಳು ಪಶ್ಚಿಮಬಂಗಾಳದ ಕೃಷ್ಣನಗರ ಕ್ಷೇತ್ರದ ಟಿಎಂಸಿಯ ಮಾಜಿ ಸಂಸದೆಯಾಗಿರುವ ಮೊಯಿತ್ರಾ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿತ್ತು.