ಕಾಂಗ್ರೆಸ್ ನಾಯಕರಿಗೆ ದ್ವಿಪಕ್ಷೀಯತೆ ಸಂದೇಶ ರವಾನಿಸಿದ ಶಶಿ ತರೂರ್

Shashi Tharoor | PTI
ಹೊಸದಿಲ್ಲಿ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸದಸ್ಯರನ್ನು ಆಯ್ಕೆ ಮಾಡಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ವಿವಾದ ಬಗೆಹರಿಯುವ ಹಂತದಲ್ಲೇ ಪಕ್ಷದ ಮುಖಂಡರಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಸಂಸದ ಶಶಿ ತರೂರ್, ಭದ್ರತೆ ಮತ್ತು ಭಯೋತ್ಪಾದನೆಯಂಥ ವಿಚಾರದಲ್ಲಿ ದ್ವಿಪಕ್ಷೀಯತೆ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಪಕ್ಷದ ಮತ್ತೊಬ್ಬ ಸಂಸದ ಮನೀಶ್ ತಿವಾರಿ ಕೂಡಾ ಇದನ್ನು ಬೆಂಬಲಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತಮ್ಮ ಹೆಸರು ಶಿಫಾರಸ್ಸು ಮಾಡದಿದ್ದರೂ, ಈ ಬಹುಪಕ್ಷ ನಿಯೋಗದ ಮುಖ್ಯಸ್ಥರಾಗಿ ತಾವು ಕಾರ್ಯನಿರ್ವಹಿಸುವುದಾಗಿ ಶಶಿ ತರೂರ್ ಪ್ರಕಟಿಸಿದ್ದರು. ಭಯೋತ್ಪಾದನೆ ವಿಚಾರದಲ್ಲಿ ರಾಜಕೀಯ ಒಮ್ಮತ ಸಾಧಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದರು. ಪಹಲ್ಗಾಮ್ ಘಟನೆ ಬಳಿಕ ಪಾಕಿಸ್ತಾನಕ್ಕೆ ಭಾರತದ ಸೇನಾ ಕಾರ್ಯಾಚರಣೆ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾಹಿತಿ ನೀಡಿದ್ದರು ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿತ್ತು.
ಈ ಸಂಬಂಧ ಲೇಖನವೊಂದರಲ್ಲಿ ತರೂರ್ ಒಗ್ಗಟ್ಟಿನ ರಂಗ ಸಂಘಟಿಸುವ ಬದಲು ಚುನಾವಣಾ ಲಾಭಕ್ಕಾಗಿ ಈ ಶೋಕದ ಸಂದರ್ಭವನ್ನು ಅಸ್ತ್ರವಾಗಿ ಬಳಸುತ್ತಿರುವ ಬಗ್ಗೆ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. 2019ರ ಪುಲ್ವಾಮಾ ಘಟನೆ ಬಳಿಕ ನಡೆಸಿದ ಪ್ರತೀಕಾರದ ದಾಳಿಯನ್ನು ಆಡಳಿತಾರೂಢ ಬಿಜೆಪಿ ಹೇಗೆ ರಾಜಕೀಯ ಲಾಭಕ್ಕೆ ಬಳಸಿಕೊಂಡಿತು ಎನ್ನುವುದನ್ನು ಬಣ್ಣಿಸಿದ್ದರು. ಅದರೆ ಪಹಲ್ಗಾಮ್ ಘಟನೆ ಬಳಿಕ ರಾಷ್ಟ್ರೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ರಾಜಕೀಯ ವಿಚಾರಗಳನ್ನು ಕೈಬಿಡಬೇಕು ಎಂದು ತರೂರ್ ಸಲಹೆ ಮಾಡಿದ್ದರು.
ತರೂರ್ ನಿರ್ಧಾರವನ್ನು ಬೆಂಬಲಿಸಿದ ಮತ್ತೊಬ್ಬ ಸಂಸದ ಮನೋಜ್ ತಿವಾರಿ, ಕಾಂಗ್ರೆಸ್ ಪಕ್ಷ ಯಾವುದೇ ನಿರ್ಧಾರ ಕೈಗೊಂಡರೂ, ನಿಯೋಗದಲ್ಲಿ ತೆರಳುವುದು ರಾಷ್ಟ್ರೀಯ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.







