ಹಕ್ಕಿ ಬಡಿತ: ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ

ಸಾಂದರ್ಭಿಕ ಚಿತ್ರ | Photo Credit :PTI
ಹೊಸದಿಲ್ಲಿ, ಜ.12: ರವಿವಾರ ಸಂಜೆ 216 ಪ್ರಯಾಣಿಕರೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಹಕ್ಕಿ ಬಡಿತದ ಪರಿಣಾಮ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನವು ಸಂಜೆ 6:25ಕ್ಕೆ ಗೋರಖ್ ಪುರ ವಿಮಾನ ನಿಲ್ದಾಣದಿಂದ ಹೊರಟಿತ್ತು. ಟೇಕ್ಆಫ್ ನ ಸುಮಾರು 15 ನಿಮಿಷಗಳ ಬಳಿಕ, ವಿಮಾನವು 16,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಜೌನಪುರದ ಬಳಿ ಹಕ್ಕಿಯೊಂದು ಅದಕ್ಕೆ ಡಿಕ್ಕಿ ಹೊಡೆದಿದೆ.
ತಕ್ಷಣ ವಾರಣಾಸಿ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನು ಸಂಪರ್ಕಿಸಿದ ಪೈಲಟ್, ವಿಮಾನವನ್ನು ವಾರಣಾಸಿಯತ್ತ ತಿರುಗಿಸಿ ಸಂಜೆ 6:56ಕ್ಕೆ ಅಲ್ಲಿನ ಲಾಲ್ ಬಹಾದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು.
ವಿವರಗಳ ಪ್ರಕಾರ, ಹಕ್ಕಿ ಬಡಿತದಿಂದ ವಿಮಾನದ ಮುಂಭಾಗಕ್ಕೆ ಹಾನಿಯಾಗಿದೆ.
ರಾತ್ರಿ 8:40ರ ವೇಳೆಗೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಮುಂದಿನ ಪ್ರಯಾಣವನ್ನು ರದ್ದುಗೊಳಿಸಿದ ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ಸ್ಥಳೀಯ ಹೋಟೆಲ್ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿತು.





