ಇಂದೋರ್ ದುರಂತ| ನಳ್ಳಿ ನೀರು ಕುಡಿಯಲು ಭಯ ಪಡುತ್ತಿರುವ ನಾಗರಿಕರು

ಸಾಂದರ್ಭಿಕ ಚಿತ್ರ
ಇಂದೋರ್, ಜ. 3: ಮಧ್ಯಪ್ರದೇಶದ ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವಿಸಿ ಹಲವರು ಮೃತಪಟ್ಟ ಬಳಿಕ ಅಲ್ಲಿನ ಜನರಿಗೆ ಮಹಾನಗರ ಪಾಲಿಕೆಯ ನೀರಿನ ಬಗ್ಗೆ ಭಯ ಮೂಡಿದೆ. ಅವರು ಬಾಟಲಿ ನೀರು ಖರೀದಿಸುತ್ತಿದ್ದಾರೆ. ಇದರಿಂದ ಅವರು ಹೆಚ್ಚುವರಿ ಆರ್ಥಿಕ ಹೊರೆ ಅನುಭವಿಸುವಂತಾಗಿದೆ.
ಅಧಿಕಾರಿಗಳ ಪ್ರಕಾರ, ಕಡಿಮೆ ಹಾಗೂ ಮಧ್ಯಮ ಆದಾಯ ಗುಂಪಿನ ದೊಡ್ಡ ಸಂಖ್ಯೆಯ ಜನರಿರುವ ಭಗೀರಥಪುರದಲ್ಲಿ ಕಲುಷಿತ ನೀರಿನಿಂದ ವಾಂತಿ ಹಾಗೂ ಅತಿಸಾರದಿಂದ 6 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಅಧಿಕ ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಆದರೆ, ವರದಿಯಾದ ಸಾವಿನ ಸಂಖ್ಯೆ 10 ಹಾಗೂ 16ರ ನಡುವೆ ಇದೆ.
‘‘ಹೌದು ನಾವು ಈಗ ಮಹಾನಗರ ಪಾಲಿಕೆಯ ನಳ್ಳಿಯಿಂದ ನೀರು ಕುಡಿಯಲು ಭಯ ಪಡುತ್ತಿದ್ದೇವೆ. ನೀರು ಸ್ವಚ್ಛವಾಗಿದೆ ಎಂಬ ಬಗ್ಗೆ ನಮಗೆ ಪುರಾವೆ ಬೇಕು. ಅನಂತರ ಮಾತ್ರವೇ ನಾವು ನೀರು ಕುಡಿಯುತ್ತೇವೆ. ನನ್ನ ಕುಟುಂಬ ಪ್ರಸ್ತುತ ಮಾರುಕಟ್ಟೆಯಿಂದ ಜಾಡಿಗಳಲ್ಲಿ ಕುಡಿಯುವ ನೀರು ಖರೀದಿಸುತ್ತಿದೆ. ಪ್ರತಿ ಜಾಡಿಗೆ 20 ರೂ. ಹಾಗೂ 30 ರೂ. ನಡುವೆ ನೀಡುತ್ತದೆ’’ ಎಂದು ಮರಾಠಿ ಮೊಹಲ್ಲಾದ ನಿವಾಸಿ ಸುನಿತಾ ಹೇಳಿದ್ದಾರೆ.
ಕಳೆದ ಎರಡು ಮೂರು ವರ್ಷಗಳಿಂದ ಈ ಪ್ರದೇಶದ ನಳ್ಳಿಯಲ್ಲಿ ಕೊಳಕು ನೀರು ಪೂರೈಸಲಾಗುತ್ತಿದೆ. ಆದರೆ, ನಿವಾಸಿಗಳ ದೂರನ್ನು ಯಾರೂ ಆಲಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಬಹಳ ಸಮಯದಿಂದ ನಾವು ಕುಡಿಯುವ ನೀರಿಗೆ ಸಲ್ಫೇಟ್ ಉಪ್ಪನ್ನು ಸೇರಿಸುತ್ತಿದ್ದೆವು ಹಾಗೂ ಕುದಿಸುತ್ತಿದ್ದೆವು ಎಂದು ಸುನಿತಾ ತಿಳಿಸಿದ್ದಾರೆ.







