ಸಂಸದ ಧೀರಜ್ ಸಾಹುಗೆ ಸೇರಿದ ಆಸ್ತಿಗಳ ಮೇಲೆ ಐಟಿ ದಾಳಿ: 300 ಕೋಟಿ ರೂ.ಗೂ ಅಧಿಕ ಮೊತ್ತದ ನಗದು ಪತ್ತೆ

Photo: PTI
ಹೊಸದಿಲ್ಲಿ: ಒಡಿಶಾ ಮತ್ತು ಜಾರ್ಖಂಡ್ನಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ಸ್ಥಳಗಳಿಂದ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವ ಲೆಕ್ಕಕ್ಕೆ ಸಿಗದ ನಗದಿನ ಮೊತ್ತ 300 ಕೋಟಿ ರೂಪಾಯಿಗೂ ಹೆಚ್ಚಿದೆ ಎಂದು ಅಧಿಕೃತ ಮೂಲಗಳು ತಿಳಿಸಿರುವುದಾಗಿ indiatoday.in ವರದಿ ಮಾಡಿದೆ.
ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ಗೆ ಸಂಪರ್ಕ ಹೊಂದಿದ ಸ್ಥಳಗಳಿಂದ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ನಗದು ಪ್ಯಾಕ್ ಮಾಡಲು ಸುಮಾರು 200 ಚೀಲಗಳನ್ನು ಬಳಸಲಾಗಿದ್ದು, ಇನ್ನೂ ಎಣಿಕೆ ಮುಂದುವರೆಯುತ್ತಿದೆ.
ನೋಟುಗಳ ಎಣಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆದಾಯ ತೆರಿಗೆ ಇಲಾಖೆಯು ಸುಮಾರು 40 ಯಂತ್ರಗಳನ್ನು ಬಳಸಿದ್ದು, ಇಲಾಖೆ ಮತ್ತು ಬ್ಯಾಂಕ್ ಗಳ ಹೆಚ್ಚುವರಿ ಸಿಬ್ಬಂದಿಯನ್ನು ಕರೆತಂದಿದೆ. ವಶಪಡಿಸಿಕೊಂಡ ಹಣವನ್ನು ರಾಜ್ಯದ ಸರ್ಕಾರಿ ಬ್ಯಾಂಕ್ಗಳಿಗೆ ಸಾಗಿಸಲು ಇಲಾಖೆಯು ಹೆಚ್ಚಿನ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದೆ.
ಇದಲ್ಲದೆ, ಬೋಲಂಗಿರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ 100 ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ತಂಡಗಳು ರಾಂಚಿಯ ಧೀರಜ್ ಸಾಹು ಅವರ ಆವರಣದಿಂದ ಇನ್ನೂ ಮೂರು ಬ್ಯಾಗ್ಗಳನ್ನು ವಶಪಡಿಸಿಕೊಂಡರೆ, ಮದ್ಯದ ಕಾರ್ಖಾನೆಗಳ ನಿರ್ವಹಣೆಯ ಉಸ್ತುವಾರಿ ವಹಿಸಿದ್ದ ಬಂಟಿ ಸಾಹು ಎಂಬುವವರ ಮನೆಯಿಂದ ಸುಮಾರು 19 ಚೀಲಗಳ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಟಿ ಸಾಹು ಮನೆಯಿಂದ ವಸೂಲಿಯಾದ ಮೊತ್ತ 20 ಕೋಟಿ ದಾಟುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ 225 ಕೋಟಿ ರೂ.ಗೂ ಹೆಚ್ಚು ಹಣವನ್ನು ಎಣಿಕೆ ಮಾಡಲಾಗಿದ್ದು, ಒಡಿಶಾದ ಸರ್ಕಾರಿ ಬ್ಯಾಂಕ್ ಶಾಖೆಗಳಲ್ಲಿ ಹಣವನ್ನು ನಿರಂತರವಾಗಿ ಠೇವಣಿ ಮಾಡಲಾಗುತ್ತಿದೆ.
ಆದಾಯ ತೆರಿಗೆ ಇಲಾಖೆ ತನಿಖಾಧಿಕಾರಿಗಳು ವಿವಿಧ ಕಂಪನಿ ಅಧಿಕಾರಿಗಳು ಮತ್ತು ಇತರರ ಹೇಳಿಕೆಗಳನ್ನು ದಾಖಲಿಸಲು ಪ್ರಾರಂಭಿಸಿದ್ದಾರೆ. ಅದಾಗ್ಯೂ, ಧೀರಜ್ ಸಾಹು ಇಲ್ಲಿಯವರೆಗೆ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.







