ಗುಜರಾತಿನಲ್ಲಿಯ ಅಂಬಾನಿಯ ವನ್ಯಜೀವಿ ಧಾಮಕ್ಕೆ ಮಂದಿರದ ಆನೆಯ ಸ್ಥಳಾಂತರಕ್ಕೆ ಜೈನರ ವಿರೋಧ: ವರದಿ

ಸಾಂದರ್ಭಿಕ ಚಿತ್ರ (PTI)
ಹುಬ್ಬಳ್ಳಿ: ಕೊಲ್ಲಾಪುರದ ನಂದನಿ ಮಠದ ಆನೆ ‘ಮಾಧುರಿ’ಯನ್ನು ಗುಜರಾತಿನಲ್ಲಿರುವ ಮುಕೇಶ್ ಅಂಬಾನಿಯವರ ವನತಾರಾ ವನ್ಯಜೀವಿ ಧಾಮಕ್ಕೆ ಸ್ಥಳಾಂತರಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಜೈನ ಸಮುದಾಯವು ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದೆ. ಈ ಆನೆಯನ್ನು ‘ಮಹಾದೇವಿ’ ಎಂದೂ ಕರೆಯಲಾಗುತ್ತದೆ ಎಂದು newindianexpress.com ವರದಿ ಮಾಡಿದೆ.
ಪೆಟಾ ಇಂಡಿಯಾದ ಅರ್ಜಿಯ ಮೇರೆಗೆ ನ್ಯಾಯಾಲಯದ ಆದೇಶದಂತೆ ಆನೆಯನ್ನು ಸ್ಥಳಾಂತರಿಸಲಾಗಿದ್ದರೂ ಇದನ್ನು ಖಂಡಿಸಿರುವ ಹೆಚ್ಚಿನ ಜೈನರು, ಖಾಸಗಿ ಉದ್ಯಮದ ವಶದಲ್ಲಿರಿಸುವ ಬದಲು ಆನೆಯನ್ನು ಮಠಕ್ಕೆ ಮರಳಿಸಬೇಕು ಅಥವಾ ಸರಕಾರಿ ವನ್ಯಜೀವಿ ಧಾಮಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ ಮತ್ತು ಬೆಳಗಾವಿಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲಾಗುತ್ತಿದ್ದು,ದೇಶಾದ್ಯಂತದ ಪ್ರಮುಖ ಜೈನ ಸಂತರು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಘೋಷಿಸಿದ್ದಾರೆ. ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರಿಗೆ ಅಹವಾಲುಗಳನ್ನು ಸಲ್ಲಿಸಲು ಸಮುದಾಯವು ಉದ್ದೇಶಿಸಿದೆ.
ಈ ವಾರದ ಪೂರ್ವಾರ್ಧದಲ್ಲಿ ಆನೆಯನ್ನು ಬೀಳ್ಕೊಡುವಾಗ ನಂದನಿ ಮಠದ ಸ್ವಾಮೀಜಿಯವರು ಅಳುತ್ತಿದ್ದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದೆ. ಹಲವಾರು ಜೈನರು ಅಂಬಾನಿ ನೇತೃತ್ವದ ಜಿಯೊ ಬ್ರ್ಯಾಂಡ್ನ ಉತ್ಪನ್ನಗಳು ಮತ್ತು ಸೇವೆಗಳನ್ನು ಬಹಿಷ್ಕರಿಸಲು ಆರಂಭಿಸಿದ್ದಾರೆ.
ಆನೆಯ ಕಳಪೆ ಆರೋಗ್ಯ ಸ್ಥಿತಿ ಮತ್ತು ಅದರ ಆಕ್ರಮಣಕಾರಿ ವರ್ತನೆಯ ಇತಿಹಾಸವನ್ನು ಉಲ್ಲೇಖಿಸಿ ಪೆಟಾ ಇಂಡಿಯಾ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿತ್ತು. ‘ಮಾಧುರಿ’ ಇತ್ತೀಚಿನ ವರ್ಷಗಳಲ್ಲಿ ಜೈನ ಸ್ವಾಮೀಜಿಯೋರ್ವರ ಸಾವಿಗೆ ಕಾರಣವಾಗಿದ್ದು ಸೇರಿದಂತೆ ಅಪಾಯಕಾರಿ ನಡವಳಿಕೆಯನ್ನು ಪ್ರದರ್ಶಿಸಿದೆ ಎಂದು ಪೆಟಾ ಇಂಡಿಯಾ ಬೆಟ್ಟು ಮಾಡಿತ್ತು. ಈ ಹಿನ್ನೆಲೆಯಲ್ಲಿ 35 ವರ್ಷದ ಈ ಆನೆಯನ್ನು ವನತಾರಾಕ್ಕೆ ಸ್ಥಳಾಂತರಿಸುವಂತೆ ಉಚ್ಚ ನ್ಯಾಯಾಲಯವು ಆದೇಶಿಸಿತ್ತು.
ಆದರೆ ಜೈನ ಸಮುದಾಯವು ಈ ಕ್ರಮವನ್ನು ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳಿಗೆ ಮಾಡಿರುವ ಅವಮಾನ ಎಂದು ಪರಿಗಣಿಸಿದೆ.
‘ಜೈನರು ತಮ್ಮ ಅನುಕಂಪ ಮತ್ತು ಅಹಿಂಸೆಗೆ ಹೆಸರುವಾಸಿಯಾಗಿದ್ದಾರೆ. ಈ ಆನೆ ದಶಕಗಳಿಂದಲೂ ನಮ್ಮ ಆಧ್ಯಾತ್ಮಿಕ ಜೀವನದ ಭಾಗವಾಗಿದೆ’ ಎಂದು ಹೇಳಿದ ವರೂರು ಜೈನ ಮಠದ ಮುಖ್ಯಸ್ಥ ಗುಣದತ್ತನಂದಿ ಮಹಾರಾಜ ಅವರು, ‘ದೇಶಾದ್ಯಂತ ಜೈನರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಮೊದಲು ಗುಜರಾತಿನಲ್ಲಿ ಗಿರ್ನಾರ್ ಮಂದಿರ ಕುರಿತು ಮತ್ತು ಈಗ ಇಲ್ಲಿ ಇದು ನಡೆಯುತ್ತಿದೆ. ಆನೆಯನ್ನು ನಂದನಿ ಮಠಕ್ಕೆ ಮರಳಿ ಕರೆತರುವುದು ಅನೇಕ ಜೈನ ಮಂದಿರಗಳ ಹೋರಾಟವಾಗಿದೆ. ಈ ಸಾಂಸ್ಕೃತಿಕ ನಷ್ಟವನ್ನು ತಡೆಯಲು ಉನ್ನತ ಅಧಿಕಾರಿಗಳನ್ನು ನಾವು ಸಂಪರ್ಕಿಸುತ್ತೇವೆ’ ಎಂದರು.
ಇದೇ ಭಾವನೆಯನ್ನು ಪ್ರತಿಧ್ವನಿಸಿದ ಕನಕಗಿರಿ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆನೆಯ ಸ್ಥಳಾಂತರ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದರು. ‘14,000 ಗೋಶಾಲೆಗಳನ್ನು ನಡೆಸುತ್ತಿರುವ ನಮಗೆ ಪ್ರಾಣಿಗಳ ಯೋಗಕ್ಷೇಮದ ಬಗ್ಗೆ ಪಾಠ ಹೇಳುವ ಅಗತ್ಯವಿದೆಯೇ? ಆನೆಯನ್ನು ಸ್ಥಳಾಂತರಿಸುವ ಬದಲು ಪರಿಸ್ಥಿತಿಗಳನ್ನು ಸುಧಾರಿಸಲು ಸರಕಾರವು ಮಠದೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲವೇ? ಮಹಾರಾಷ್ಟ್ರಕ್ಕೆ ತನ್ನದೇ ಆದ ಸೌಲಭ್ಯವಿಲ್ಲದಿದ್ದರೆ ಆನೆಯನ್ನು ಗುಜರಾತಿಗೆ ಏಕೆ ರವಾನಿಸಬೇಕಿತ್ತು?’ ಎಂದೂ ಅವರು ಪ್ರಶ್ನಿಸಿದರು.







