ಟ್ರಂಪ್ ವೆನೆಝುವೆಲಾದಲ್ಲಿ ಮಡುರೊ ಪದಚ್ಯುತಗೊಳಿಸಿದ ಹಾದಿಯನ್ನೇ ಬಿಹಾರದಲ್ಲಿ ನಿತೀಶ್ ಗೆ ಅನುಸರಿಸಿದ ಮೋದಿ: ಜೈರಾಮ್ ರಮೇಶ್ ಆರೋಪ

ಜೈರಾಮ್ ರಮೇಶ್ |Photo Credit : PTI
ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಗೆ ತೆರಳುವ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತೀವ್ರವಾಗಿ ಟೀಕಿಸಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಝುವೆಲಾದ ನಾಯಕ ನಿಕೋಲಸ್ ಮಡುರೊಗೆ ಮಾಡಿದ್ದನ್ನೇ ಪ್ರಧಾನಿ ನರೇಂದ್ರ ಮೋದಿ ನಿತೀಶ್ ಕುಮಾರ್ ಅವರಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಹಾರದ ದೀರ್ಘಕಾಲ ಸೇವೆ ಸಲ್ಲಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಒಂದು ದಿನದ ಬಳಿಕ ಶುಕ್ರವಾರ ರಮೇಶ್ ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿದ ಜೈರಾಮ್ ರಮೇಶ್, “ಟ್ರಂಪ್ ಮಡುರೊಗೆ ಮಾಡಿದ್ದನ್ನು ಮೋದಿ ಅವರು ನಿತೀಶ್ ಕುಮಾರ್ ಅವರಿಗೆ ಮಾಡಿದ್ದಾರೆ. ಇದು ಒಂದು ದಂಗೆ” ಎಂದು ಹೇಳಿದ್ದಾರೆ.
ಅಮೆರಿಕದ ಸೇನೆಯು ಜನವರಿ 3ರಂದು ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಕ್ಯಾರಕಾಸ್ ನಲ್ಲಿರುವ ಅವರ ಮನೆಯಿಂದ ವಶಕ್ಕೆ ಪಡೆದುಕೊಂಡು, ಫೆಡರಲ್ ಮಾದಕವಸ್ತು ಕಳ್ಳಸಾಗಣೆ ಆರೋಪಗಳ ಮೇಲೆ ನ್ಯೂಯಾರ್ಕ್ ಗೆ ಕರೆದೊಯ್ದ ಘಟನೆಗೆ ಅವರು ಹೋಲಿಕೆ ಮಾಡಿದ್ದಾರೆ.
ಸುದ್ದಿಮಾಧ್ಯಮಗಳೊಂದಿಗೆ ಮಾತನಾಡಿದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ರಮೇಶ್, ತಮ್ಮ ಟೀಕೆಗೆ ಒತ್ತು ನೀಡಲು ಅಂತರರಾಷ್ಟ್ರೀಯ ಸಾದೃಶ್ಯಗಳನ್ನು ಬಳಸಿದರು. ಪಾಟ್ನಾದಲ್ಲಿ ಬಿಜೆಪಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಗಳ ನಡುವೆ ಈ ಬದಲಾವಣೆ ನಡೆಯುತ್ತಿರುವುದು, ಕೆಲವೇ ತಿಂಗಳುಗಳ ಹಿಂದೆ ನಿತೀಶ್ ಕುಮಾರ್ ಅವರನ್ನು ಮತ್ತೆ ಅಧಿಕಾರಕ್ಕೆ ತಂದ ಮತದಾರರಿಗೆ ಮಾಡಿದ ದ್ರೋಹವಾಗಿದೆ ಎಂದು ಅವರು ಆರೋಪಿಸಿದರು.
“ಜಿ2 ಆಯೋಜಿಸಿದ ನಾಯಕತ್ವದ ದಂಗೆ ಮತ್ತು ಆಡಳಿತ ಬದಲಾವಣೆ ನಡೆದಿದೆ. ಇದು ಜನರ ಜನಾದೇಶಕ್ಕೆ ಮಾಡಿದ ದೊಡ್ಡ ದ್ರೋಹ” ಎಂದು ರಮೇಶ್ ಹೇಳಿದ್ದಾರೆ.
ವಿರೋಧ ಪಕ್ಷದ ಹಲವಾರು ನಾಯಕರು ಕೂಡ ರಮೇಶ್ ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿತೀಶ್ ಕುಮಾರ್ ಅವರ ಅಚ್ಚರಿಯ ನಿರ್ಧಾರವನ್ನು ಪ್ರಶ್ನಿಸಿರುವ ಅವರು, ಇದನ್ನು ರಾಜಕೀಯ ಅನುಕೂಲತೆಗೆ ತೆಗೆದುಕೊಂಡ ಕ್ರಮವೆಂದು ಟೀಕಿಸಿದ್ದಾರೆ. ಕೆಲವರು ಈ ಬೆಳವಣಿಗೆಯನ್ನು ರಾಜಕೀಯವಾಗಿ ಬದಿಗೆ ಸರಿಸುವ ಕ್ರಮಕ್ಕೆ ಹೋಲಿಸಿದ್ದು, NDA ದಲ್ಲಿ ಬಿಜೆಪಿಯ ಪ್ರಾಬಲ್ಯದಿಂದ ನಾಯಕತ್ವ ಬದಲಾವಣೆಗೆ ಒತ್ತಡ ಬಂದಿದೆ ಎಂದು ಆರೋಪಿಸಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಬಿಹಾರವನ್ನು ಹಲವು ಅವಧಿಗಳಲ್ಲಿ ಮುನ್ನಡೆಸಿರುವ ಅನುಭವಿ ರಾಜಕಾರಣಿ ನಿತೀಶ್ ಕುಮಾರ್, ತಮ್ಮ ನಿರ್ಧಾರದ ಬಗ್ಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮೇಲ್ಮನೆಗೆ ತೆರಳಿದ ನಂತರವೂ ರಾಜ್ಯದ ಅಭಿವೃದ್ಧಿಗಾಗಿ ಸೇವೆ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
“ಎರಡು ದಶಕಗಳಿಗೂ ಹೆಚ್ಚು ಕಾಲ ನೀವು ನನ್ನ ಮೇಲೆ ನಂಬಿಕೆ ಮತ್ತು ಬೆಂಬಲ ತೋರಿದ್ದೀರಿ. ಅದರಿಗಾಗಿ ನಾನು ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲೂ ಬಿಹಾರದ ಅಭಿವೃದ್ಧಿಗೆ ನನ್ನ ಸೇವೆ ಮುಂದುವರಿಯುತ್ತದೆ” ಎಂದು ಅವರು ಬರೆದಿದ್ದಾರೆ.
ಆದರೆ ಬಿಹಾರದ ಜನರು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಮತ ನೀಡಿದ್ದರು. ಅವರು ಮತ ನೀಡಿದ್ದು ಬಿಜೆಪಿ ನೇತೃತ್ವದ ನಾಯಕತ್ವ ಬದಲಾವಣೆಗೆ ಅಥವಾ ಅವರ ಹುದ್ದೆಯಿಂದ ನಿರ್ಗಮಿಸಲು ಅಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಇದು ಜನಾದೇಶಕ್ಕೆ ಮಾಡಿದ ದ್ರೋಹ ಎಂದು ಅವರು ಪುನರುಚ್ಚರಿಸಿದ್ದಾರೆ.
ಈ ನಿರ್ಧಾರದ ರಾಜಕೀಯ ಪರಿಣಾಮಗಳು ತಳಮಟ್ಟದಲ್ಲೂ ಗೋಚರಿಸುತ್ತಿವೆ. ನಿತೀಶ್ ಕುಮಾರ್ ಅವರ ಪಕ್ಷವಾದ ಜನತಾದಳ ಯುನೈಟೆಡ್ ಬೆಂಬಲಿಗರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಕೆಲವರು ಪಾಟ್ನಾದಲ್ಲಿರುವ ಪಕ್ಷದ ಕಚೇರಿಗಳ ಎದುರು ಪ್ರತಿಭಟನೆ ನಡೆಸಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ಕಡಿಮೆ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ, ಈ ಬೆಳವಣಿಗೆಯನ್ನು ಮತದಾರರ ವಿಶ್ವಾಸವನ್ನು ದುರ್ಬಲಗೊಳಿಸುವ ರಾಜಕೀಯಕ್ಕೆ ಉದಾಹರಣೆಯೆಂದು ಟೀಕಿಸಿದೆ. ಇಂತಹ ರಾಜಕೀಯ ಬದಲಾವಣೆಗಳನ್ನು ನಿಯಂತ್ರಿಸದಿದ್ದರೆ ಇದೇ ರೀತಿಯ ಘಟನೆಗಳು ಇತರ ರಾಜ್ಯಗಳಲ್ಲಿಯೂ ಸಂಭವಿಸಬಹುದು ಎಂದು ಜೈರಾಮ್ ರಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.







