ಜಮ್ಮು | ಆಕಸ್ಮಿಕವಾಗಿ ಗುಂಡು ಹಾರಿ ಯೋಧನ ಮೃತ್ಯು

ಸಾಂದರ್ಭಿಕ ಚಿತ್ರ | PTI
ಭದೇರ್ವಾ,ಆ.12: ತನ್ನ ಸರ್ವಿಸ್ ರೈಫಲ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಯೋಧನೋರ್ವ ಮೃತಪಟ್ಟಿರುವ ಘಟನೆ ಜಮ್ಮು ವಿಭಾಗದ ದೋಡಾ ಜಿಲ್ಲೆಯ ಭರ್ದೇವಾದಲ್ಲಿನ ಸೇನಾ ಶಿಬಿರದಲ್ಲಿ ನಡೆದಿದೆ.
ಸರ್ನಾ ಶಿಬಿರದಲ್ಲಿ ಸೋಮವಾರ ಈ ಘಟನೆ ಸಂಭವಿಸಿದ್ದು, ಒಡಿಶಾ ಮೂಲದ ಸಿಪಾಯಿ ಸುರೇಶ್ ಬಿಸ್ವಾಲ್ ಕಾವಲು ಕರ್ತವ್ಯದಲ್ಲಿದ್ದರು. ಅಧಿಕಾರಿಗಳ ಪ್ರಕಾರ ಬಿಸ್ವಾಲ್ ಇದ್ದ ಸ್ಥಳದಿಂದ ಗುಂಡಿನ ಶಬ್ದ ಕೇಳಿ ಬಂದಿದ್ದು,ಸಹೋದ್ಯೋಗಿಗಳು ಧಾವಿಸಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಬಿಸ್ವಾಲ್ ರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಬಿಸ್ವಾಲ್ ತನ್ನ ಸರ್ವೀಸ್ ರೈಫಲ್ ನ ಚೇಂಬರ್ ನ್ನು ಖಾಲಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು ಎಂದು ಪ್ರಾಥಮಿಕ ತನಿಖೆಯು ಸೂಚಿಸಿದೆ. ಅವರ ಸಾವಿಗೆ ನಿಖರ ಕಾರಣವನ್ನು ದೃಢಪಡಿಸಿಕೊಳ್ಳಲು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಎಸ್ಪಿ ವಿನೋದ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.





