ಪತ್ರಕರ್ತ ಸಜ್ಜಾದ್ ಅಹ್ಮದ್ ಡಾರ್ ಬಂಧನವನ್ನು ರದ್ದುಗೊಳಿಸಿದ ಜಮ್ಮು-ಕಾಶ್ಮೀರ ಹೈಕೋರ್ಟ್

ಜಮ್ಮು-ಕಾಶ್ಮೀರ ಹೈಕೋರ್ಟ್ | Photo: PTI
ಶ್ರೀನಗರ: ಕೇವಲ ಸರಕಾರದ ಟೀಕಾಕಾರರಾಗಿದ್ದಾರೆ ಎಂಬ ಕಾರಣದಿಂದ ವ್ಯಕ್ತಿಗಳನ್ನು ಬಂಧಿಸುವ ಅಧಿಕಾರಿಗಳ ಪ್ರವೃತ್ತಿಯನ್ನು ಕಟುವಾಗಿ ಟೀಕಿಸಿರುವ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಉಚ್ಚ ನ್ಯಾಯಾಲಯವು, ಇದು ಮುನ್ನೆಚ್ಚರಿಕೆ ಬಂಧನ ಕಾನೂನಿನ ದುರುಪಯೋಗವಾಗಿದೆ ಎಂದು ಬಣ್ಣಿಸಿದೆ.
ಸಜ್ಜಾದ್ ಗುಲ್ ಹೆಸರಿನಲ್ಲಿ ಬರೆಯುವ ಕಾಶ್ಮೀರಿ ಪತ್ರಕರ್ತ ಸಜ್ಜಾದ್ ಅಹ್ಮದ್ ಡಾರ್ ಅವರ ಬಂಧನವನ್ನು ರದ್ದುಗೊಳಿಸಿದ ಸಂದರ್ಭ ನ್ಯಾಯಾಲಯವು ಈ ಟೀಕೆಯನ್ನು ಮಾಡಿದೆ. ತನ್ನ ಟ್ವೀಟ್ಗಳು ಮತ್ತು ಹೇಳಿಕೆಗಳಿಗಾಗಿ ಡಾರ್ 2022,ಜ.16ರಿಂದ ಜಮ್ಮು-ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನದಲ್ಲಿದ್ದರು.ಅವರ ಟ್ವೀಟ್ಗಳು ಮತ್ತು ಹೇಳಿಕೆಗಳು ದ್ವೇಷವನ್ನು ಉತ್ತೇಜಿಸುತ್ತವೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಜ್ಯದ ಭದ್ರತೆಗೆ ಹಾನಿಕಾರಕವಾಗಿವೆ ಎಂದು ಆರೋಪಿಸಲಾಗಿತ್ತು.
ಆರೋಪಗಳು ಯಾವುದೇ ನಿರ್ದಿಷ್ಟ ನಿದರ್ಶನವಿಲ್ಲದೆ ಅಸ್ಪಷ್ಟ ಮತ್ತು ಸಾರ್ವತ್ರಿಕವಾಗಿವೆ ಎಂದು ಹೇಳಿದ ನ್ಯಾಯಾಲಯವು ಡಾರ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿದೆ.
ವ್ಯಕ್ತಿಯೋರ್ವ ಸರಕಾರದ ಟೀಕಾಕಾರನಾಗಿದ್ದಾನೆ ಎಂಬ ಏಕೈಕ ಕಾರಣದಿಂದ ಆತನನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ.
ಈ ಹಿಂದೆ,2022 ಡಿಸೆಂಬರ್ನಲ್ಲಿ ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠವು ಬಂಧನ ಆದೇಶದಲ್ಲಿ ಹಸ್ತಕ್ಷೇಪಕ್ಕೆ ನಿರಾಕರಿಸಿತ್ತು. ನಂತರ ಡಾರ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.







