ವಿದಾಯ ಭಾಷಣದಲ್ಲಿ ರಾಜ್ಯಸಭೆಯ ಕ್ಷಮೆಯಾಚಿಸಿದ ಜಯಾಬಚ್ಚನ್

ಜಯಾ ಬಚ್ಚನ್ | Photo: PTI
ಹೊಸದಿಲ್ಲಿ : ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ರಾಜ್ಯಸಭಾದ ಅಧ್ಯಕ್ಷ ಜಗದೀಪ್ ಧನಕರ್ ಅವರನ್ನು ಟೀಕಿಸುವ ಮೂಲಕ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗಿದ್ದರು. ಆದರೆ ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತರಾಗುತ್ತಿರುವ ಅವರು ಶುಕ್ರವಾರ ಸದನದಲ್ಲಿ ಮಾಡಿದ ವಿದಾಯದ ಭಾಷಣದಲ್ಲಿ ತನ್ನ ನಡವಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ. ತಾನು ಮುಂಗೋಪಿ. ಆದರೆ ಯಾರನ್ನೂ ನೋಯಿಸುವ ಉದ್ದೇಶ ತನಗಿರುವುದಿಲ್ಲವೆಂದು ಆಕೆ ಹೇಳಿದ್ದಾರೆ.
ನಾನು ಯಾಕೆ ರೊಚ್ಚಿಗೇಳುತ್ತೇನೆಂದು ಜನರು ಆಗಾಗ್ಗೆ ಕೇಳುತ್ತಿರುತ್ತಾರೆ. ಅದು ನನ್ನ ಸ್ವಭಾವ. ನನ್ನನ್ನು ನಾನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವಿಷಯವನ್ನು ನಾನು ಒಪ್ಪಿಕೊಳ್ಳದೆ ಇದ್ದಲ್ಲಿ ಅಥವಾ ಇಷ್ಟಪಡದೆ ಇದ್ದಲ್ಲಿ ನಾನು ತಾಳ್ಮೆ ಕಳೆದುಕೊಳ್ಳುತ್ತೇನೆ ಎಂದು ಜಯಾಬಚ್ಚನ್ ಹೇಳಿದ್ದಾರೆ.
ಒಂದು ವೇಳೆ ನಾನು ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲಿ ಅಥವಾ ವೈಯಕ್ತಿಕವಾಗಿ ನಿಂದಿಸಿದ್ದಲ್ಲಿ ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.





