ಛಾಯಾ ಸಚಿವ ಸಂಪುಟದ ಅಗತ್ಯವಿಲ್ಲ: ಬಿಜೆಪಿ ವಿರುದ್ಧ ಉಮರ್ ಅಬ್ದುಲ್ಲಾ ವಾಗ್ದಾಳಿ
ನಾವು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ ಎಂದ ಜಮ್ಮು ಮತ್ತು ಕಾಶ್ಮೀರ ಸಿಎಂ

ಉಮರ್ ಅಬ್ದುಲ್ಲಾ | PTI
ಶ್ರೀನಗರ: ನನ್ನ ಸರಕಾರವು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲಿದೆ ಎಂದು ಶನಿವಾರ ಹೇಳಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, “ಭಾರತದಲ್ಲಿ ಛಾಯಾ ಸಚಿವ ಸಂಪುಟ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ” ಎಂದು ಬಿಜೆಪಿ ಛಾಯಾ ಸಚಿವ ಸಂಪುಟ ರಚಿಸಿದೆ ಎಂಬ ವರದಿಗಳನ್ನು ಉಲ್ಲೇಖಿಸಿ, ಅದರ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವಾರ ನಿಧನರಾದ ನ್ಯಾಶನಲ್ ಕಾನ್ಫರೆನ್ಸ್ ಶಾಸಕ ಹಸ್ನೈನ್ ಮಸೂದಿ ಸಹೋದರ ಹಾಗೂ ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಮೀರ್ ವೈಝ್ ಉಮರ್ ಫಾರೂಖ್ ರ ಮಾವ ಗುಲಾಮ್ ಸಿಬ್ತೈನ್ ಮಸೂದಿ ನಿವಾಸಕ್ಕೆ ಭೇಟಿ ನೀಡಿ, ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇವಲ ಒಂದು ಸಚಿವ ಸಂಪುಟ ಮಾತ್ರವಿದೆ. ನಮ್ಮ ದೇಶದಲ್ಲಿ ಯಾವುದೇ ಛಾಯಾ ಸಚಿವ ಸಂಪುಟವಿಲ್ಲ. ಇಲ್ಲಿಯವರೆಗೆ ರಾಜ್ಯವನ್ನು ಬಿಜೆಪಿ ಆಳಿದೆ. ಈಗ ಜನರ ಸರಕಾರ ತನ್ನ ಕೆಲಸವನ್ನು ಮಾಡಲಿದೆ” ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
“ಛಾಯಾ ಸಚಿವ ಸಂಪುಟದ ಅಗತ್ಯವಿಲ್ಲ. ನಾವು ಜನರ ನಿರೀಕ್ಷೆಗಳನ್ನು ಈಡೇರಿಸುವ ಭರವಸೆ ನೀಡಿದ್ದೇವೆ ಹಾಗೂ ನಾವು ನಮ್ಮ ಭರವಸೆಗಳಿಗೆ ಬದ್ಧರಾಗಿ ಉಳಿಯಲಿದ್ದೇವೆ” ಎಂದು ಅವರು ಹೇಳಿದರು.
ಸೋಮವಾರದಿಂದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಬಜೆಟ್ ಅಧಿವೇಶನ ಪ್ರಾರಂಭಗೊಳ್ಳಲಿದೆ.





