'ಒಂದು ದೇಶ ಒಂದು ಚುನಾವಣೆ' ಮಸೂದೆಯಲ್ಲಿ ಚುನಾವಣಾ ಆಯೋಗಕ್ಕೆ ಅನಿಯಂತ್ರಿತ ಅಧಿಕಾರ: ನ್ಯಾ. ಸಂಜೀವ್ ಖನ್ನಾ ಕಳವಳ

ನ್ಯಾ. ಸಂಜೀವ್ ಖನ್ನಾ | PTI
ಹೊಸದಿಲ್ಲಿ: ಚುನಾವಣಾ ಆಯೋಗ ಹಲವು ಕಾರಣಗಳಿಗಾಗಿ ಟೀಕೆಗೆ ಒಳಗಾಗುತ್ತಿರುವಾಗಲೇ ಅದರ ಮೇಲೆ ಈಗ ಮತ್ತೊಂದು ಪ್ರಹಾರವಾಗಿದೆ. ಒಂದು ದೇಶ ಒಂದು ಚುನಾವಣೆ ಮಸೂದೆಗೆ ಸಂಬಂಧಿಸಿದ ಸಂಸದೀಯ ಸಮಿತಿಗೆ ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಲಿಖಿತ ಉತ್ತರ ನೀಡಿದ್ದು, ದೇಶದ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸುವುದರ ಕುರಿತು ವಾದಗಳು ಉದ್ಭವಿಸಬಹುದು ಎಂದು ಮಸೂದೆಗೆ ಸಂಬಂಧಿಸಿದಂತೆ ಸಮಿತಿಗೆ ನೀಡಿರುವ ಉತ್ತರದಲ್ಲಿ ನ್ಯಾ. ಖನ್ನಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯೊಂದಿಗೆ ವಿಧಾನಸಭೆಯೊಂದರ ಚುನಾವಣೆ ನಡೆಸದಿರುವ ಬಗ್ಗೆ ನಿರ್ಧರಿಸಲು ಮತ್ತು ಆ ಬಗ್ಗೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲು ಈ ಮಸೂದೆಯಲ್ಲಿ ಚುನಾವಣಾ ಆಯೋಗಕ್ಕೆ ಅನಿಯಂತ್ರಿತ ಅಧಿಕಾರವಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಅವರು, ಈ ನಿಬಂಧನೆ ಸಂವಿಧಾನದ ಮೂಲ ರಚನೆಯನ್ನು ಮತ್ತು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂಬ ಕಾರಣದಿಂದ ಪ್ರಶ್ನಿಸಬೇಕಾಗಿದೆ ಎಂದು ಹೇಳಿದ್ದಾರೆ.
ವಿಧಿ 14 ಕಾನೂನಿನ ಮುಂದೆ ಸಮಾನತೆಗೆ ಸಂಬಂಧಿಸಿದೆ. ಚುನಾವಣಾ ಆಯೋಗ ಹೀಗೆ ಚುನಾವಣೆಗಳನ್ನು ಮುಂದೂಡುವುದು ಪರೋಕ್ಷವಾಗಿ ರಾಷ್ಟ್ರಪತಿ ಆಡಳಿತಕ್ಕೆ ಕಾರಣವಾಗಬಹುದು. ಅಂದರೆ ಕೇಂದ್ರ ಸರಕಾರ ರಾಜ್ಯ ಸರಕಾರದ ನಿಯಂತ್ರಣ ತೆಗೆದುಕೊಳ್ಳಬಹುದು ಎಂದು ನ್ಯಾ. ಖನ್ನಾ ಆತಂಕ ವ್ಯಕ್ತಪಡಿಸಿದ್ದಾರೆ.
ಇದು ಸಂವಿಧಾನದಲ್ಲಿ ಹೇಳಲಾಗಿರುವ ಒಕ್ಕೂಟ ಸ್ವರೂಪವನ್ನು ಉಲ್ಲಂಘಿಸುವುದರಿಂದ ಪ್ರಶ್ನಾರ್ಹವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಸೂದೆಗೆ ಸಂಬಂಧಿಸಿದ ವಿವಿಧ ವಾದಗಳ ಕುರಿತು ಪ್ರತಿಕ್ರಿಯಿಸಿರುವ ಅವರು,1951-52,1957,1962 ಮತ್ತು 1967ರಲ್ಲಿ ಏಕಕಾಲಿಕ ಚುನಾವಣೆಗಳು ನಡೆದದ್ದು ಕಾಕತಾಳೀಯ. ಖಂಡಿತವಾಗಿಯೂ ಅದು ಸ್ಪಷ್ಟ ಅಥವಾ ಸೂಚ್ಯ ಸಾಂವಿಧಾನಿಕ ಆದೇಶವಾಗಿರಲಿಲ್ಲ ಎಂದು ನ್ಯಾ. ಖನ್ನಾ ಹೇಳಿದ್ದಾರೆ.
ಕಾರ್ಯಕ್ಷಮತೆ ಆಧರಿಸಿ ಮಾಡುವ ಪರಿಶೀಲನೆಗೂ ನ್ಯಾಯಾಂಗ ಪರಿಶೀಲನೆಗೂ ವ್ಯತ್ಯಾಸವಿದೆ. ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ಗಳು ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಾಗ, ಅದು ಕೇವಲ ಶಾಸಕಾಂಗ ಅಧಿಕಾರದ ದೃಢೀಕರಣವಾಗಿರುತ್ತದೆ. ಹಾಗೆಯೇ, ತಿದ್ದುಪಡಿ ಅಥವಾ ನಿಬಂಧನೆ ಸಾಂವಿಧಾನಿಕ ಮಿತಿಗಳನ್ನು ಉಲ್ಲಂಘಿಸುವುದಿಲ್ಲ ಎಂಬುದರ ದೃಢೀಕರಣವಾಗಿರುತ್ತದೆ ಎಂದು ಖನ್ನಾ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪುಗಳು ಯಾವುದೇ ರೀತಿಯಲ್ಲಿಯೂ ಅಂತಹ ನಿಬಂಧನೆಗಳ ಅಗತ್ಯವನ್ನು ಸೂಚಿಸುವುದಿಲ್ಲ ಎಂದು ಕೂಡ ನ್ಯಾ. ಖನ್ನಾ ಹೇಳಿದ್ದಾರೆ.
ಮಂಗಳವಾರ ನ್ಯಾ. ಖನ್ನಾ ಅವರು ಸಮಿತಿಯೊಂದಿಗೆ ಸಂವಾದ ನಡೆಸಲಿದ್ದು, ಅದಕ್ಕೆ ಮುಂಚಿತವಾಗಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







