ನಗದು ಹಣ ಪತ್ತೆ ವಿವಾದ: ನ್ಯಾ. ಯಶವಂತ ವರ್ಮಾರ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಯಶವಂತ ವರ್ಮಾ (Photo: PTI)
ಹೊಸದಿಲ್ಲಿ: ತನ್ನ ವಾಗ್ದಂಡನೆಗಾಗಿ ಸಮಿತಿಯನ್ನು ರಚಿಸುವ ಲೋಕಸಭಾ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ ವರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.
ನ್ಯಾ.ವರ್ಮಾರ ವಾಗ್ದಂಡನೆಗಾಗಿ 146 ಸಂಸದರು ಸಹಿ ಮಾಡಿದ್ದ ಗೊತ್ತುವಳಿಯನ್ನು ಅಂಗೀಕರಿಸಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಅವರು ವಿರುದ್ಧದ ಆರೋಪಗಳ ತನಿಖೆಗಾಗಿ ಸಮಿತಿಯೊಂದನ್ನು ರಚಿಸಿದ್ದು,ನ್ಯಾ.ಅಮಿತ್ ಕುಮಾರ,ನ್ಯಾ.ಮಣಿಂದರ್ ಮೋಹನ ಶ್ರೀವಾಸ್ತವ ಮತ್ತು ಬಿ.ಬಿ.ಆಚಾರ್ಯ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಕಳೆದ ವರ್ಷದ ಆಗಸ್ಟ್ನಲ್ಲಿ ಸರ್ವೋಚ್ಚ ನ್ಯಾಯಾಲಯವು ಆಂತರಿಕ ಸಮಿತಿಯ ವರದಿ ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ತನ್ನ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಗಳನ್ನು ಆರಂಭಿಸಲು ಮಾಡಿದ್ದ ಶಿಫಾರಸನ್ನು ಪ್ರಶ್ನಿಸಿ ನ್ಯಾ.ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ನ್ಯಾ.ವರ್ಮಾ ಅವರ ಪದಚ್ಯುತಿಗೆ ಶಿಫಾರಸು ಮಾಡಿದ್ದ ಆಂತರಿಕ ತನಿಖಾ ಕಾರ್ಯವಿಧಾನವು ಕಾನೂನುಬದ್ಧ ಅನುಮೋದನೆಯನ್ನು ಹೊಂದಿದೆ ಎಂದು ಅದು ಎತ್ತಿ ಹಿಡಿದಿತ್ತು.
ನ್ಯಾ.ವರ್ಮಾ ಅವರು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾಗ ಮಾ.14ರಂದು ಅವರ ಇಲ್ಲಿಯ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಲೆಕ್ಕಕ್ಕೆ ಸಿಗದ ಭಾರೀ ಪ್ರಮಾಣದ ಅರೆಸುಟ್ಟ ನೋಟುಗಳನ್ನು ಪತ್ತೆ ಹಚ್ಚಿದ್ದರು.







