ಕಾಶ್ಮೀರ: ಉಗ್ರರ ಶೋಧ ಕಾರ್ಯಾಚರಣೆ 3ನೇ ದಿನಕ್ಕೆ; ಹೆಲಿಕಾಪ್ಟರ್, ಡ್ರೋನ್ ಬಳಕೆ

PC : PTI
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಅರಣ್ಯದಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾದ ಭಯೋತ್ಪಾದಕರನ್ನು ಪತ್ತೆಹಚ್ಚುವ ಬೃಹತ್ ಶೋಧ ಕಾರ್ಯಾಚರಣೆ ಶುಕ್ರವಾರ ಮೂರನೇ ದಿನಕ್ಕೆ ಕಾಲಿರಿಸಿದೆ. ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಗೆ ಹೆಲಿಕಾಪ್ಟರ್ಗಳು, ಡ್ರೋನ್ಗಳು ಮತ್ತು ನಾಯಿಗಳನ್ನು ನಿಯೋಜಿಸಿವೆ. ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ಹೆಚ್ಚುವರಿ ಸೈನಿಕರನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಚಲ್-ಚಾತ್ರೂ ಪ್ರದೇಶದ ಕಂಝಲ್ ಮಂಡುನಲ್ಲಿರುವ ದಟ್ಟ ಅರಣ್ಯದಲ್ಲಿ ಬುಧವಾರ ಸಂಜೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಘರ್ಷಣೆ ಸಂಭವಿಸಿದ ಬಳಿಕ, ತಪ್ಪಿಸಿಕೊಂಡಿರುವ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
‘‘ಕುಚಲ್ ನಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಗುಪ್ತಚರ ಮಾಹಿತಿಯನ್ನು ಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇನೆ ಮತ್ತು ಸಿಆರ್ಪಿಎಫ್ ನೆರವಿನಿಂದ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದಾಗ ಸಂಘರ್ಷ ಆರಂಭಗೊಂಡಿತು’’ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅರಣ್ಯದಲ್ಲಿ ಈಗಲೂ 2-3 ಭಯೋತ್ಪಾದಕರು ಅಡಗಿರಬಹುದು ಎಂಬುದಾಗಿ ಭದ್ರತಾ ಪಡೆಗಳು ಭಾವಿಸಿವೆ. ಹಾಗಾಗಿ, ಶೋಧ ಪ್ರದೇಶದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.





