ಕೇರಳ: ಕಣ್ಣೂರಿನ ವೈದ್ಯೆ ಅಬುಧಾಬಿಯಲ್ಲಿ ನಿಗೂಢ ಮೃತ್ಯು

PC: x.com/gulf_news
ಅಬುಧಾಬಿ: ಕೇರಳದ ಕಣ್ಣೂರು ಬಳಿಯ ತಲಪ್ ನಿವಾಸಿ ಡಾ.ಅರಯಕಂಡಿ ಧನಲಕ್ಷ್ಮಿ (54) ಅವರ ಮೃತದೇಹ ಅಬುಧಾಬಿಯ ಮುಸಾಫಾದಲ್ಲಿರುವ ಅವರ ನಿವಾಸದಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದೆ. ಎರಡು ದಿನಗಳಿಂದ ಅವರು ಯಾವುದೇ ದೂರವಾಣಿ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆತಂಕಿತರಾಗಿ ಬಂದು ನೋಡಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಬುಧಾಬಿ ಲೈಫ್ ಕೇರ್ ಹಾಸ್ಪಿಟಲ್ ನಲ್ಲಿ ದಂತ ಶಸ್ತ್ರಚಿಕಿತ್ಸಕಿಯಾಗಿದ್ದ ಡಾ.ಧನಲಕ್ಷ್ಮಿ, ಒಂದು ದಶಕದಿಂದ ಅಬುಧಾಬಿಯಲ್ಲಿ ವಾಸವಿದ್ದರು. ಅಬುಧಾಬಿ ಮಲಯಾಳಿ ಸಮಾಜಮ್ ನಲ್ಲಿ ಸಕ್ರಿಯರಾಗಿದ್ದ ಅವರು, ಸಾಂಸ್ಕೃತಿಕ ಕಾರ್ಯಕರ್ತೆಯಾಗಿ, ಲೇಖಕಿಯಾಗಿಯೂ ಜನಪ್ರಿಯರಾಗಿದ್ದರು. ಜಾಲತಾಣಗಳಲ್ಲೂ ಅವರು ಸಕ್ರಿಯರಾಗಿದ್ದರು.
ಡಾ.ಧನಲಕ್ಷ್ಮಿಯವರು ಈ ಮೊದಲು ಕಣ್ಣೂರಿನ ಧನಲಕ್ಷ್ಮಿ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸಿದ್ದರು. ಅವರು ಆನಂದಕೃಷ್ಣ ಬಸ್ ಸರ್ವೀಸ್ ನ ಮಾಲೀಕ ದಿವಂಗತ ನಾರಾಯಣನ್ ಅವರ ಪುತ್ರಿ. ಪತಿ ಸುಜೀತ್ ಪ್ರಸ್ತುತ ಕೇರಳ ನಿವಾಸಿ.
ಮೃತರು ಒಡಹುಟ್ಟಿದವರಾದ ಆನಂದ ಕೃಷ್ಣನ್, ಶಿವರಾಮ್ ಮತ್ತು ಡಾ.ಸೀತಾಲಕ್ಷ್ಮಿಯವರನ್ನು ಅಗಲಿದ್ದಾರೆ.





