ಕೇರಳ: ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಸ್ಮಿನ್ ಜಾಫರ್ ಪಾದ ತೊಳೆಯುವ ವೀಡಿಯೊ ವೈರಲ್ ಬೆನ್ನಲ್ಲೇ ಗುರುವಾಯೂರು ದೇವಸ್ಥಾನದಲ್ಲಿ ʼಶುದ್ಧೀಕರಣʼ!

ತ್ರಿಶೂರ್ : ಕೇರಳದ ತ್ರಿಶೂರ್ನಲ್ಲಿರುವ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಸಾಮಾಜಿಕ ಮಾಧ್ಯಮ ಇನ್ ಫ್ಲುಯೆನ್ಸರ್ ಓರ್ವರು ತಮ್ಮ ಪಾದಗಳನ್ನು ತೊಳೆಯುವ ರೀಲ್ ಚಿತ್ರೀಕರಿಸಿದ ನಂತರ ಶುದ್ಧೀಕರಣ ವಿಧಿಗಳನ್ನು ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಜಾಸ್ಮಿನ್ ಜಾಫರ್ ದೇವಾಲಯದ ಪದ್ಧತಿಗಳನ್ನು ಉಲ್ಲಂಘಿಸಿದ್ದಾರೆ ಮತ್ತು ದೇವಸ್ಥಾನದ ಕೊಳವನ್ನು ಅಶುದ್ಧಿಗೊಳಿಸಿದ್ದಾರೆ ಎಂದು ಗುರುವಾಯೂರು ದೇವಸ್ವಂ ಹೇಳಿದೆ.
ಮಂಗಳವಾರ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನದವರೆಗೆ ದೇವರ ದರ್ಶನವನ್ನು ನಿರ್ಬಂಧಿಸಲಾಗಿದೆ. ಶುದ್ಧೀಕರಣ ವಿಧಿಗಳು ಪೂರ್ಣಗೊಂಡ ನಂತರವೇ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಕೊಳದ ಪಾವಿತ್ರ್ಯದ ಉಲ್ಲಂಘನೆ ಮತ್ತು ದೇವಾಲಯದ ನಿರ್ಬಂಧಿತ ವಲಯಗಳಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯನ್ನು ನಿಷೇಧಿಸುವ ಹೈಕೋರ್ಟ್ ಆದೇಶದ ಉಲ್ಲಂಘನೆ ಉಲ್ಲೇಖಿಸಿ ದೇವಸ್ವಂ ಆಡಳಿತಾಧಿಕಾರಿ ಒ.ಬಿ. ಅರುಣ್ ಕುಮಾರ್ ದೇವಸ್ಥಾನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರು ದಿನಗಳ ಹಿಂದೆ ಈ ಕುರಿತು ವಿಡಿಯೋ ಮಾಡಿದ್ದ ಜಾಫರ್, ನಂತರ ಅದನ್ನು ಡಿಲಿಟ್ ಮಾಡಿದ್ದರು ಮತ್ತು ದೇವಸ್ಥಾನದಲ್ಲಿನ ನಿರ್ಬಂಧಿತ ಪ್ರದೇಶಗಳ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದರು.





