ಕುಂಭಮೇಳ ಕಾಲ್ತುಳಿತ ಪ್ರಕರಣ ದೊಡ್ಡ ಸಂಗತಿಯೇನಲ್ಲ; ಅಖಿಲೇಶ್ ಯಾದವ್ ಹೇಳಿಕೆಗೆ ಹೇಮಾಮಾಲಿನಿ ಪ್ರತಿಕ್ರಿಯೆ

ಬಿಜೆಪಿ ಸಂಸದೆ ಹೇಮಾ ಮಾಲಿನಿ (Photo credit: indiatoday.in)
ಹೊಸದಿಲ್ಲಿ: ಜನವರಿ 29 ರಂದು ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ಕುರಿತು ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ನೀಡಿರುವ ಹೇಳಿಕೆಯನ್ನು ಮಂಗಳವಾರ ಬಿಜೆಪಿ ಸಂಸದೆ ಹೇಮಾ ಮಾಲಿನಿ ಟೀಕಿಸಿದ್ದು, ಈ ಘಟನೆ "ಅಷ್ಟೇನು ದೊಡ್ಡದಲ್ಲ" ಎಂದು ಹೇಳಿದ್ದಾರೆ.
ತಪ್ಪು ತಪ್ಪಾಗಿ ಮಾತನಾಡುವುದು ಅಖಿಲೇಶ್ ಯಾದವ್ ಅವರ ಕೆಲಸ ಎಂದು ಹೇಳಿದ ಹೇಮಾ ಮಾಲಿನಿ, ಮಹಾ ಕುಂಭಮೇಳದ ಬಗ್ಗೆ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
"ಅಖಿಲೇಶ್ ಅವರ ಕೆಲಸವೇ ತಪ್ಪಾಗಿ ಮಾತನಾಡುವುದು... ನಾವು ಕೂಡ ಕುಂಭಮೇಳಕ್ಕೆ ಭೇಟಿ ನೀಡಿದ್ದೇವೆ. ಘಟನೆ ನಡೆದಿತ್ತು, ಆದರೆ ಅದು ಅಷ್ಟು ದೊಡ್ಡದಲ್ಲ. ಅದನ್ನು ಉತ್ಪ್ರೇಕ್ಷಿಸಲಾಗುತ್ತಿದೆ" ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಹೇಮಾ ಮಾಲಿನಿ, ಉತ್ತರ ಪ್ರದೇಶ ಸರ್ಕಾರವು ಮಹಾ ಕುಂಭಮೇಳದಂತಹ ಭವ್ಯ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದೆ. ಇದನ್ನು ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ, ಎಲ್ಲವನ್ನೂ ತುಂಬಾ ಚೆನ್ನಾಗಿ ಮಾಡಲಾಗಿದೆ. ತುಂಬಾ ಜನರು ಬರುತ್ತಿದ್ದಾರೆ, ಅದನ್ನು ನಿರ್ವಹಿಸುವುದು ತುಂಬಾ ಕಷ್ಟ ಆದರೆ ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ, ಅಖಿಲೇಶ್ ಅವರು ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸಿದ್ದು, ಸರ್ಕಾರವು ಕಾಲ್ತುಳಿತದ ನಿಜವಾದ ಸಾವುನೋವುಗಳ ಸಂಖ್ಯೆಯನ್ನು ಮರೆಮಾಡುತ್ತಿದೆ ಎಂದು ಅವರು ಹೇಳಿದರು.
"ಸರ್ಕಾರ ನಿರಂತರವಾಗಿ ಬಜೆಟ್ ಅಂಕಿಅಂಶಗಳನ್ನು ನೀಡುತ್ತಿರುವಾಗ, ದಯವಿಟ್ಟು ಮಹಾ ಕುಂಭದಲ್ಲಿ ಸಾವನ್ನಪ್ಪಿದವರ ಅಂಕಿಅಂಶಗಳನ್ನು ಸಹ ನೀಡಬೇಕು. ಮಹಾ ಕುಂಭದ ವ್ಯವಸ್ಥೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಸರ್ವಪಕ್ಷ ಸಭೆ ಕರೆಯಬೇಕೆಂದು ನಾನು ಒತ್ತಾಯಿಸುತ್ತೇನೆ. ಮಹಾ ಕುಂಭ ವಿಪತ್ತು ನಿರ್ವಹಣೆ ಜವಾಬ್ದಾರಿಯನ್ನು ಸೇನೆಗೆ ನೀಡಬೇಕು" ಎಂದು ಅಖಿಲೇಶ್ ಯಾದವ್ ಸಂಸತ್ತಿನಲ್ಲಿ ಹೇಳಿದರು.