ಐಆರ್ಸಿಟಿಸಿ ಹಗರಣ : ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿ ವಿರುದ್ಧ ಆರೋಪ ರೂಪಿಸಲು ದಿಲ್ಲಿ ನ್ಯಾಯಾಲಯ ಆದೇಶ

File Photo: PTI
ಹೊಸದಿಲ್ಲಿ: ಐಆರ್ಸಿಟಿಸಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ವಿರುದ್ಧ ಆರೋಪವನ್ನು ರೂಪಿಸಲು ದಿಲ್ಲಿ ನ್ಯಾಯಾಲಯ ಆದೇಶಿಸಿದೆ.
ಲಾಲು ಪ್ರಸಾದ್ ಯಾದವ್ ವಿರುದ್ಧ ಸಾರ್ವಜನಿಕ ಸೇವಕನಾಗಿ ಅಧಿಕಾರದ ದುರುಪಯೋಗ ಮತ್ತು ವಂಚನೆಗೆ ಸಂಚು ರೂಪಿಸಿದ ಆರೋಪ ಮತ್ತು ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ವಿರುದ್ಧ ವಂಚನೆ ಮತ್ತು ವಂಚನೆಗೆ ಪಿತೂರಿ ಆರೋಪ ಹೊರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.
ಲಾಲು ಪ್ರಸಾದ್ ಯಾದವ್ ಸಾರ್ವಜನಿಕ ಸೇವಕನ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ಅವರಿಗೆ ಆಸ್ತಿ ವರ್ಗಾಯಿಸಲು ಸಹಕರಿಸಿದ್ದಾರೆ. ಇದರಿಂದ ರಾಜ್ಯ ಖಜಾನೆಗೆ ಆರ್ಥಿಕ ನಷ್ಟವನ್ನುಂಟುಮಾಡಿದೆ ಎಂದು ನ್ಯಾಯಾಲಯ ಗಮನಿಸಿದೆ.





