ಅಹಮದಾಬಾದ್ ವಿಮಾನ ದುರಂತ | ದುರಂತದಲ್ಲಿ ಬದುಕುಳಿದಿರುವ ಏಕೈಕ ಪ್ರಯಾಣಿಕ ಈಗ ಹೇಗಿದ್ದಾರೆ?

PC : indiatoday.in
ಹೊಸ ದಿಲ್ಲಿ: ಜೂನ್ 12, 2025 ಭಾರತೀಯ ವೈಮಾನಿಕ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಅಹಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಡಿಕ್ಕಿ ಹೊಡೆದು ವಿಮಾನದ ಸಿಬ್ಬಂದಿಗಳೂ ಸೇರಿದಂತೆ ಒಟ್ಟು 241 ಮಂದಿ ಮೃತಪಟ್ಟಿದ್ದರು. ಈ ದುರ್ಘಟನೆಯಲ್ಲಿ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದರು. ಈ ಅಪಘಾತ ಸಂಭವಿಸಿದ ನಂತರ, ಬೀದಿಯಲ್ಲಿ ಏಕಾಂಗಿಯಾಗಿ ನಡೆದುಕೊಂಡು ಬರುತ್ತಿದ್ದ ವಿಶ್ವಾಸ್ ಕುಮಾರ್ ರಮೇಶ್ ಹಲವರ ಅಚ್ಚರಿಗೂ ಕಾರಣರಾಗಿದ್ದರು.
ಈ ಘಟನೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಜರ್ಜರಿತರಾಗಿರುವ ವಿಶ್ವಾಸ್ ಕುಮಾರ್ ರಮೇಶ್, “ನಾನು ಏಕಾಂಗಿಯಾಗಿ ಜೀವಿಸುತ್ತಿದ್ದು, ನನ್ನ ಪತ್ನಿ ಹಾಗೂ ಪುತ್ರನೊಂದಿಗೆ ಮಾತುಕತೆಯನ್ನೂ ನಡೆಸುತ್ತಿಲ್ಲ” ಎಂದು BBC ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತನ್ನೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ತನ್ನ ಕಿರಿಯ ಸಹೋದರ ಅಜಯ್ ಕೂಡಾ ವಿಮಾನ ದುರಂತದಲ್ಲಿ ಮೃತಪಟ್ಟ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿರುವ ವಿಶ್ವಾಸ್ ಕುಮಾರ್ ರಮೇಶ್, “ಈ ಅಪಘಾತದಲ್ಲಿ ನಾನೊಬ್ಬನೇ ಬದುಕುಳಿದಿರುವುದು. ನನಗಿದನ್ನು ನಂಬಲಾಗುತ್ತಿಲ್ಲ. ಇದೊಂದು ಪವಾಡ” ಎಂದು ಆಶ್ಚಅರ್ಯಾಘಾತ ವ್ಯಕ್ತಪಡಿಸಿದ್ದಾರೆ.
ತಮ್ಮ ಯಶಸ್ಸಿನ ಬೆನ್ನೆಲುಬಾಗಿದ್ದ ಕಿರಿಯ ಸಹೋದರ ಅಜಯ್ ಕೂಡಾ ಈ ದುರಂತದಲ್ಲಿ ಮೃತಪಟ್ಟ ಬಗ್ಗೆ ಅವರು ತೀವ್ರ ಘಾಸಿಗೊಳಗಾಗಿದ್ದಾರೆ. “ನಾನು ನನ್ನ ಸಹೋದರ ಅಜಯ್ ನನ್ನೂ ಈ ದುರಂತದಲ್ಲಿ ಕಳೆದುಕೊಂಡಿದ್ದೇನೆ” ನನ್ನ ಸಹೋದರ ನನ್ನ ಬೆನ್ನೆಲುಬಾಗಿದ್ದ. ಕಳೆದ ಕೆಲವು ವರ್ಷಗಳಲ್ಲಿ ಆತನ ನನಗೆ ಯಾವಾಗಲೂ ನೆರವು ನೀಡಿದ್ದ” ವಿಶ್ವಾಸ್ ಕುಮಾರ್ ರಮೇಶ್ ಹೇಳುವಾಗ ಅವರ ಕಣ್ಣಂಚು ಭಾರವಾಗಿತ್ತು.
“ನಾನೀಗ ಏಕಾಂಗಿಯಾಗಿದ್ದೇನೆ. ನಾನು ನನ್ನ ಕೊಠಡಿಯಲ್ಲಿ ಏಕಾಂಗಿಯಾಗಿ ಕುಳಿತಿರುತ್ತೇನೆ. ನಾನು ನನ್ನ ಪತ್ನಿ ಹಾಗೂ ಪುತ್ರನೊಂದಿಗೂ ಮಾತನಾಡುತ್ತಿಲ್ಲ. ನಾನು ನನ್ನ ಮನೆಯಲ್ಲಿ ಏಕಾಂಗಿಯಾಗಿರಲೇ ಬಯಸುತ್ತಿದ್ದೇನೆ” ಎಂದೂ ಅವರು ಹೇಳಿಕೊಂಡಿದ್ದಾರೆ.
ವಿಶ್ವಾಸ್ ಕುಮಾರ್ ರಮೇಶ್ ಅವರು Post traumatic stress disorderಗೆ ಗುರಿಯಾಗಿದ್ದಾರೆ ಎಂದು ವೈದ್ಯಕೀಯ ತಪಾಸಣೆಯ ವೇಳೆ ಹೇಳಲಾಗಿದೆ. ಆದರೆ, ಭಾರತದಿಂದ ಲೀಸೆಸ್ಟರ್ ನ ತಮ್ಮ ನಿವಾಸಕ್ಕೆ ಮರಳಿದಾಗಿನಿಂದ . ತಮ್ಮ ನಿವಾಸದಲ್ಲಿ ಅವರು ವೈದ್ಯಕೀಯ ಆರೈಕೆಯಲ್ಲಿದ್ದರೂ ಇದುವರೆಗೆ ಅದಕ್ಕಾಗಿ ಯಾವುದೇ ಚಿಕಿತ್ಸೆ ಪಡೆದಿಲ್ಲ. ನನ್ನ ಕುಟುಂಬ ಆ ಅಪಘಾತ ಹಾಗೂ ನನ್ನ ಸಹೋದರ ಇನ್ನಿಲ್ಲ ಎಂಬ ಆಘಾತದಿಂದ ಇನ್ನೂ ಹೊರಬರಬೇಕಿದೆ ಎಂದೂ ಅವರು ಹೇಳುತ್ತಾರೆ.







