ಪ್ರೇಮ ವೈಫಲ್ಯ | ಪ್ರಿಯಕರನ ಆತ್ಮಹತ್ಯೆಗಾಗಿ ಯುವತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಲು ಸಾಧ್ಯವಿಲ್ಲ: ದಿಲ್ಲಿ ಹೈಕೋರ್ಟ್
ದಿಲ್ಲಿ ಹೈಕೋರ್ಟ್ | PC :PTI
ಹೊಸದಿಲ್ಲಿ: ಪ್ರೇಮ ವೈಫಲ್ಯದಿಂದಾಗಿ ಪುರುಷನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಲ್ಲಿ, ಅದಕ್ಕೆ ಸಂಬಂಧಪಟ್ಟ ಮಹಿಳೆಯನ್ನು ಹೊಣೆಗಾರಳನ್ನಾಗಿ ಮಾಡಲು ಸಾಧ್ಯವಿಲ್ಲವೆಂದು ದಿಲ್ಲಿ ಹೈಕೋರ್ಟ್ ಬುಧವಾರ ಹೇಳಿದೆ. ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದ ಸಂದರ್ಭ ಅದು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ದುರ್ಬಲ ಮನಸ್ಥಿತಿಯ ವ್ಯಕ್ತಿಯು ತೆಗೆದುಕೊಳ್ಳುವ ತಪ್ಪು ನಿರ್ಧಾರಕ್ಕೆ ಇನ್ನೋರ್ವ ವ್ಯಕ್ತಿಯನ್ನು ದೂಷಿಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಹೇಳಿದೆ.
‘‘ಒಂದು ವೇಳೆ ಪ್ರೇಮ ವೈಫಲ್ಯದಿಂದ ನೊಂದು ಪ್ರೇಮಿಯು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪರೀಕ್ಷೆಯಲ್ಲಿ ಕಳಪೆ ಸಾಧನೆಗಾಗಿ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಂಡಲ್ಲಿ, ತನ್ನ ಮೊಕದ್ದಮೆ ವಜಾಗೊಂಡಿತೆಂದು ಕಕ್ಷಿದಾರ ಸಾವಿಗೆ ಶರಣಾದಲ್ಲಿ, ಸಂಬಂಧಪಟ್ಟ ಮಹಿಳೆಯಾಗಲಿ, ಪರೀಕ್ಷಕಿಯಾಗಲಿ, ನ್ಯಾಯವಾದಿಯನ್ನಾಗಲಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ’’ ಎಂದು ನ್ಯಾಯಮೂರ್ತಿ ಅಮಿತ್ ಮಹಾಜನ್ ತಿಳಿಸಿದ್ದಾರೆ.
2023ರಲ್ಲಿ ಯುವಕನೊಬ್ಬನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದ ಓರ್ವ ಮಹಿಳೆ ಹಾಗೂ ಆಕೆಯ ಸ್ನೇಹಿತನಿಗೆ ನಿರೀಕ್ಷಣಾ ಜಾಮೀನು ನೀಡಿದ ಸಂದರ್ಭ ಅದು ಈ ಆದೇಶವನ್ನು ನೀಡಿದೆ.
‘‘ಮೇಲ್ನೋಟಕ್ಕೆ ಕಕ್ಷಿದಾರರ ಬಗ್ಗೆ ತನಗಿದ್ದ ಆಕ್ರೋಶದ ಮನಸ್ಥಿತಿಯನ್ನಷ್ಟೇ ಮೃತವ್ಯಕ್ತಿಯು ಡೆತ್ನೋಟ್ ನಲ್ಲಿ ವ್ಯಕ್ತಪಡಿಸಿದ್ದಾನೆ. ಆದರೆ ಮೃತನು ಆತ್ಮಹತ್ಯೆ ಮಾಡುವುದಕ್ಕೆ ಪ್ರೇರೇಪಿಸುವ ಉದ್ದೇಶವನ್ನು ಅವರು ಹೊಂದಿದ್ದರೆಂದು ಪರಿಭಾವಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ ಹಾಗೂ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.
ಈ ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಗೆ ಸಹಕರಿಸುವಂತೆ ಅದು ಅರ್ಜಿದಾರರಿಗೆ ತಿಳಿಸಿದೆ. ಒಂದು ವೇಳೆ ಜಾಮೀನು ಶರತ್ತುಗಳನ್ನು ಅರ್ಜಿದಾರರು ಉಲ್ಲಂಘಿಸಿದಲ್ಲಿ ಅವರ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಮನವಿ ಸಲ್ಲಿಸಲು ಸರಕಾರಕ್ಕೆ ಮುಕ್ತ ಸ್ವಾತಂತ್ರ್ಯವಿದೆ ಎಂದು ಅದು ಹೇಳಿದೆ.
ಮಹಿಳೆಯು ಆತ್ಮಹತ್ಯೆ ಮಾಡಿಕೊಂಡ ತನ್ನ ಪುತ್ರ ಹಾಗೂ ಇತರ ಆರೋಪಿಯೊಂದಿಗೆ ಪ್ರೇಮಸಂಬಂಧವನ್ನು ಹೊಂದಿದ್ದಳೆಂದು ಮೃತ ಯುವಕನ ತಂದೆ ದೂರಿನಲ್ಲಿ ತಿಳಿಸಿದ್ದರು.
ತಾವು ಪರಸ್ಪರ ದೈಹಿಕ ಸಂಬಂಧವನ್ನು ಹೊಂದಿದ್ದು, ಶೀಘ್ರದಲ್ಲೇ ವಿವಾಹವಾಗಲಿದ್ದೇವೆ ಎಂದು ಅರ್ಜಿದಾರರು, ಮೃತವ್ಯಕ್ತಿಯೊಂದಿಗೆ ಹೇಳಿಕೊಳ್ಳುತ್ತಿದ್ದರು, ಆ ಮೂಲಕ ಆತನನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದರು ಎಂದು ಆರೋಪಿಸಲಾಗಿದೆ.
ಯುವಕ ಆತನ ಕೊಠಡಿಯಲ್ಲಿ ಸಾವನ್ನಪ್ಪಿರುವುದನ್ನು ಆತನ ತಾಯಿ ಕಂಡಿದ್ದರು. ತನ್ನ ಆತ್ಮಹತ್ಯೆಗೆ ಪ್ರೇಯಸಿ ಹಾಗೂ ಆಕೆಯ ಸ್ನೇಹಿತ ಕಾರಣವೆಂದು ಯುವಕನು ಡೆತ್ನೋಟ್ನಲ್ಲಿ ಬರೆದಿದ್ದನು.