ಮಧ್ಯಪ್ರದೇಶ: ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವು ಪ್ರಕರಣ; ಕೋಲ್ಡ್ರಿಫ್ ಪ್ರವರ್ತಕರ ಚೆನ್ನೈ ಸೊತ್ತು ಮುಟ್ಟುಗೋಲು

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಡಿ. 3: ಮಧ್ಯಪ್ರದೇಶದಲ್ಲಿ ಕನಿಷ್ಠ 20 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕ ಸ್ರೇಸನ್ ಫಾರ್ಮಾಸ್ಯೂಟಿಕಲ್ಸ್ನ ಪ್ರವರ್ತಕರಿಗೆ ಸೇರಿದ ಚೆನ್ನೈಯಲ್ಲಿರುವ ಎರಡು ಫ್ಲ್ಯಾಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಸ್ರೇಸನ್ ಫಾರ್ಮಾಸ್ಯೂಟಿಕಲ್ಸ್ ನ ಪ್ರವರ್ತಕ ಜಿ. ರಂಗನಾಥ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೇರಿದ ತಮಿಳುನಾಡಿನ ಚೆನ್ನೈಯ ಕೋಡಂಬಕ್ಕಂನಲ್ಲಿರುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಫ್ಯಾಟ್ ಗಳ ಮೌಲ್ಯ 2.04 ಕೋ.ರೂ. ಎಂದು ಹೇಳಿಕೆ ತಿಳಿಸಿದೆ.
ರಂಗನಾಥ್ ನನ್ನು ಮಧ್ಯಪ್ರದೇಶ ಪೊಲೀಸರು ಅಕ್ಟೋಬರ್ನಲ್ಲಿ ಬಂಧಿಸಿದ್ದರು.
ಸ್ರೇಶನ್ ಫಾರ್ಮಾ ತನ್ನ ನೈಜ ಉತ್ಪಾದನೆ ವೆಚ್ಚವನ್ನು ಮರೆ ಮಾಚಲು ಹಾಗೂ ಲಾಭವನ್ನು ಹೆಚ್ಚಿಸಲು ಅಕ್ರಮ ವ್ಯಾಪಾರ ವಿಧಾನವನ್ನು ಬಳಸಿದೆ. ಈ ಲಾಭಗಳು ಅಪರಾಧದ ಆದಾಯ ಅಲ್ಲದೆ, ಬೇರೇನೂ ಅಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ.
ಔಷಧ ತಯಾರಕರು ಔಷಧ ದರ್ಜೆಯ ಕಚ್ಚಾ ವಸ್ತುಗಳನ್ನು ಬಳಸದೆ, ಕೈಗಾರಿಕೆ ದರ್ಜೆಯ ಕಚ್ಚಾ ವಸ್ತುಗಳನ್ನು ಬಳಸಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ದಾಖಲೆ ಸೃಷ್ಠಿಯಾಗುವುದನ್ನು ತಪ್ಪಿಸಲು ಕಚ್ಛಾ ವಸ್ತುಗಳನ್ನು ಇನ್ವಾಯ್ಸ್ಗಳಿಲ್ಲದೆ ನಗದು ನೀಡಿ ಖರೀದಿಸಲಾಗುತ್ತಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.







