ಪರವಾನಿಗೆ ಅವಧಿ ಮೀರಿದ ಮಮತಾ ಹೆಲಿಕಾಪ್ಟರ್; ನಿರ್ವಾಹಕರಿಗೆ ಶೋ-ಕಾಸ್ ನೋಟಿಸ್

ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತಾ,ನ.25: ಮಂಗಳವಾರ ರಾಜಕೀಯ ರ್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೊಂಗಾಂವ್ ಭೇಟಿಗೆ ನಿಯೋಜಿಸಲಾಗಿದ್ದ ಹೆಲಿಕಾಪ್ಟರ್ ಅವಧಿ ಮೀರಿದ ಪರವಾನಿಗೆಯೊಂದಿಗೆ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದ ನಂತರ ಅವರ ಹೆಲಿಕಾಪ್ಟರ್ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬದಲಿಗೆ ಬ್ಯಾನರ್ಜಿ ಉತ್ತರ 24 ಪರಗಣಗಳ ಜಿಲ್ಲೆಯ ಬೊಂಗಾಂವ್ ಗೆ ರಸ್ತೆ ಮೂಲಕ ಪ್ರಯಾಣಿಸಿದರು.
ಈ ಸಂಬಂಧ ಹೆಲಿಕಾಪ್ಟರ್ ನಿರ್ವಾಹಕರಿಗೆ ಶೋ-ಕಾಸ್ ನೋಟಿಸ್ ನೀಡಲಾಗಿದೆ.
ಹಿರಿಯ ಆಡಳಿತಾಧಿಕಾರಿಗಳ ಪ್ರಕಾರ ಮುಖ್ಯಮಂತ್ರಿಗಳು ಸುಮಾರು ಆರು ತಿಂಗಳುಗಳಿಂದ ಹೆಲಿಕಾಪ್ಟರ್ ನ್ನು ಬಳಸಿರಲಿಲ್ಲ. ಸೋಮವಾರ ಅದು ತನ್ನ ಕಡ್ಡಾಯ ಪರೀಕ್ಷಾರ್ಥ ಹಾರಾಟವನ್ನು ಪೂರ್ಣಗೊಳಿಸಿತ್ತು.
ಪರವಾನಿಗೆಯ ಅವಧಿ ಮುಗಿದಿದ್ದನ್ನು ತಕ್ಷಣವೇ ಗುರುತಿಸಬೇಕಿತ್ತು. ದಾಖಲೆಗಳನ್ನು ಪರಿಶೀಲಿಸದೆ ಪರೀಕ್ಷಾರ್ಥ ಹಾರಾಟಕ್ಕೆ ಅವಕಾಶ ನೀಡಿದ್ದು ಸ್ವೀಕಾರಾರ್ಹವಲ್ಲ. ತಪಾಸಣೆಯ ಸಂದರ್ಭದಲ್ಲಿ ಪರವಾನಿಗೆಯ ಅವಧಿ ಮುಗಿದಿದ್ದನ್ನು ವರದಿ ಮಾಡಿರಲಿಲ್ಲ. ಈ ವಿಷಯವು ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಯೋರ್ವರು ತಿಳಿಸಿದರು.
ಈ ಘಟನೆಯಿಂದ ಮುಖ್ಯಮಂತ್ರಿಗಳು ಅಸಮಾಧಾನಗೊಂಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದವು.
ಇಂತಹ ನಿರ್ಲಕ್ಷ್ಯವನ್ನು,ಅದೂ ವಿವಿಐಪಿಗಳ ಸಂಚಾರವನ್ನು ಒಳಗೊಂಡ ವಿಷಯಗಳಲ್ಲಿ, ಸಹಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಸಂಪೂರ್ಣ ವಿವರಣೆಯನ್ನು ಕೇಳಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೋರ್ವರು ತಿಳಿಸಿದರು.
ಈ ಕಣ್ತಪ್ಪು ಹೇಗೆ ಸಂಭವಿಸಿತ್ತು ಮತ್ತು ಅದನ್ನು ಮೊದಲೇ ಏಕೆ ತಿಳಿಸಿರಲಿಲ್ಲ ಎನ್ನುವುದನ್ನು ಕಂಡುಕೊಳ್ಳಲು ವಿಚಾರಣೆಯನ್ನು ಆರಂಭಿಸಲಾಗಿದೆ.







