ಮಹಾರಾಷ್ಟ್ರ| ಗೋಸಾಗಾಟಗಾರನ ಥಳಿಸಿ ಹತ್ಯೆ: ಬಜರಂಗದಳದ 6 ಸದಸ್ಯರ ಬಂಧನ
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ 'ಗೋರಕ್ಷಕರ' ತಂಡವೊಂದು ಗೋ ಸಾಗಾಟ ಮಾಡುತ್ತಿದ್ದ 23 ವರ್ಷದ ಯುವಕನ ಮೇಲೆ ದಾಳಿ ನಡೆಸಿ ಹತ್ಯೆಗೈದಿದೆ. ಘಟನೆ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
![ಮಹಾರಾಷ್ಟ್ರ| ಗೋಸಾಗಾಟಗಾರನ ಥಳಿಸಿ ಹತ್ಯೆ: ಬಜರಂಗದಳದ 6 ಸದಸ್ಯರ ಬಂಧನ ಮಹಾರಾಷ್ಟ್ರ| ಗೋಸಾಗಾಟಗಾರನ ಥಳಿಸಿ ಹತ್ಯೆ: ಬಜರಂಗದಳದ 6 ಸದಸ್ಯರ ಬಂಧನ](https://www.varthabharati.in/h-upload/2023/06/14/1152290-cops.gif)
ಸಾಂದರ್ಭಿಕ ಚಿತ್ರ
ನಾಶಿಕ್ : ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ 'ಗೋರಕ್ಷಕರ' ತಂಡವೊಂದು ಗೋ ಸಾಗಾಟ ಮಾಡುತ್ತಿದ್ದ 23 ವರ್ಷದ ಯುವಕನ ಮೇಲೆ ದಾಳಿ ನಡೆಸಿ ಹತ್ಯೆಗೈದಿದೆ. ಘಟನೆ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಸಾಗಾಟಗಾರ ಲುಕ್ಮಾನ್ ಅನ್ಸಾರಿ ಎಂಬವರ ಮೃತದೇಹ ಇಗಟುರಿ ಪ್ರದೇಶದ ಘಟನದೇವಿ ಎಂಬಲ್ಲಿನ ಕಣಿವೆಯೊಂದರಲ್ಲಿ ಜೂನ್ 10ರಂದು ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿತ್ತು.
ಪ್ರಕರಣದ ಇನ್ನೂ ಕೆಲವು ಆರೋಪಿಗಳಿಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಎಲ್ಲಾ ಆರೋಪಿಗಳು ರಾಷ್ಟ್ರೀಯ ಬಜರಂಗದಳದ ಸದಸ್ಯರೆಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 8ರಂದು ಅನ್ಸಾರಿ ಮತ್ತಾತನ ಇಬ್ಬರು ಸಹವರ್ತಿಗಳು ಟೆಂಪೋವೊಂದರಲ್ಲಿ ದನ ಸಾಗಾಟ ನಡೆಸುತ್ತಿದ್ದಾಗ ಥಾಣೆ ಜಿಲ್ಲೆಯ ಸಹಾಪುರ ಎಂಬಲ್ಲಿನ ವಿಹಿಗಾಂವ್ ಪ್ರದೇಶದಲ್ಲಿ ಸುಮಾರು 10ರಿಂದ 15 ಬಜರಂಗದಳ ಕಾರ್ಯಕರ್ತರು ಅವರನ್ನು ತಡೆದು ನಿಲ್ಲಿಸಿದ್ದರು.
ನಂತರ ಟೆಂಪೋದಲ್ಲಿದ್ದ ನಾಲ್ಕು ದನಗಳನ್ನು ತಮ್ಮ ವಶಕ್ಕೆ ಪಡೆದು ವಾಹನವನ್ನು ಘಟನದೇವಿ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ಕೊಂಡು ಹೋಗಿ ಆ ಮೂವರೂ ಅನ್ಸಾರಿ ಮೇಲೆ ಹಲ್ಲೆಗೈದಿದ್ದರು. ಆತನ ಜೊತೆಗಿದ್ದವರು ತಪ್ಪಿಸಿಕೊಂಡರೂ ಅನ್ಸಾರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ, ಅನ್ಸಾರಿ ಕಣಿವೆಗೆ ಬಿದ್ದು ಮೃತಪಟ್ಟಿದ್ದಾಗಿ ಆರೋಪಿಗಳು ಹೇಳಿದ್ದರೂ ಅನ್ಸಾರಿ ಥಳಿತಕ್ಕೊಳಗಾಗಿ ಮೃತಪಟ್ಟಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.