ಮಣಿಪುರ: ನಾಲ್ಕು ವರ್ಷಗಳಲ್ಲಿ 52,000 ಎಕರೆ ಅರಣ್ಯ ನಷ್ಟ

PC : NDTV
ಹೊಸದಿಲ್ಲಿ: ಮಣಿಪುರವು 2021 ಮತ್ತು 2025ರ ನಡುವಿನ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ 52,000 ಎಕರೆ ಅರಣ್ಯ ಪ್ರದೇಶವನ್ನು ಕಳೆದುಕೊಂಡಿದೆ ಎಂದು ಬಾಹ್ಯಾಕಾಶ ವಿಶ್ಲೇಷಣಾ ಸಂಸ್ಥೆ ಸುಹೋರಾ ನಡೆಸಿದ ಅಧ್ಯಯನವು ತಿಳಿಸಿದೆ.
ಅಧ್ಯಯನವು ಹೈ-ರೆಸೊಲ್ಯೂಷನ್ ಉಪಗ್ರಹ ದತ್ತಾಂಶ ಮತ್ತು ಸುಧಾರಿತ ಜಿಯೊಸ್ಪೇಷಿಯಲ್ ಬುದ್ಧಿಮತ್ತೆಯನ್ನು ಬಳಸಿಕೊಂಡು ಮಣಿಪುರದ ಭೂ ಪ್ರದೇಶದಲ್ಲಿ ನಿರ್ಣಾಯಕ ಬದಲಾವಣೆಗಳನ್ನು ಗುರುತಿಸಿದೆ ಎಂದು ಸುಹೋರಾ ತಿಳಿಸಿದೆ.
ಅಧ್ಯಯನದಲ್ಲಿ ಕಂಡುಬಂದಿರುವ ಅಂಶಗಳು ಆತಂಕಕಾರಿಯಾಗಿವೆ. ಈ ನಾಲ್ಕು ವರ್ಷಗಳಲ್ಲಿ ಮಾನವಜನ್ಯ ಮತ್ತು ಪರ್ಯಾವರಣ ಅಂಶಗಳಿಂದಾಗಿ ಅಂದಾಜು 21,000 ಹೆಕ್ಟೇರ್(52,000 ಎಕರೆ) ಅರಣ್ಯ ನಾಶಗೊಂಡಿದೆ ಎಂದು ಅಧ್ಯಯನವು ಹೇಳಿದೆ.
ಆದಾಗ್ಯೂ ನಾಶಗೊಂಡ ಅರಣ್ಯದ ಕೆಲವು ಭಾಗಗಳಲ್ಲಿ ಸಸ್ಯ ಸಂಕುಲ ಮತ್ತೆ ತಲೆಯೆತ್ತಿರುವುದು ಚೇತರಿಕೆಯ ಭರವಸೆದಾಯಕ ಲಕ್ಷಣವಾಗಿದ್ದು,ಸೂಕ್ತ ಕಾರ್ಯತಂತ್ರಗಳ ಮೂಲಕ ರಾಜ್ಯದ ವಿವಿಧೆಡೆಗಳಲ್ಲಿ ಅರಣ್ಯವನ್ನು ಮರುನಿರ್ಮಿಸಬಹುದು ಎಂದು ಅಧ್ಯಯನವು ಹೇಳಿದೆ.
ಗಸಗಸೆ ಕೃಷಿ ವ್ಯಾಪಕಗೊಂಡಿರುವುದು ಅರಣ್ಯ ನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂದೂ ಅದು ಬೆಟ್ಟು ಮಾಡಿದೆ.





