ಮೂಲನಿವಾಸಿಗಳಿಂದ ಹೊರಗಿನವರಿಗೆ ಭೂ ವರ್ಗಾವಣೆ ನೋಂದಣಿಗೆ ಮಣಿಪುರ ಸರಕಾರ ನಿಷೇಧ

ಸಾಂದರ್ಭಿಕ ಚಿತ್ರ
ಇಂಫಾಲ: ಮಣಿಪುರ ಸರಕಾರ ಹೊರಡಿಸಿರುವ ನೂತನ ಅಧಿಸೂಚನೆ ಪ್ರಕಾರ, ಮಣಿಪುರದ ಮೂಲ ನಿವಾಸಿಗಳಿಂದ ಹೊರಗಿನವರಿಗೆ ಭೂ ವರ್ಗಾವಣೆ ನೋಂದಣಿ ಮಾಡುವುದನ್ನು ನಿಷೇಧಿಸಲಾಗಿದೆ.
ಆದರೆ, ಮೂಲನಿವಾಸಿಯಲ್ಲದವರು ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು ಎಂಬ ಷರತ್ತಿನ ಮೇಲೆ ಮೂಲ ನಿವಾಸಿಗಳಿಂದ ಭೂ ವರ್ಗಾವಣೆ ನೋಂದಣಿ ಮಾಡಲು ಮಣಿಪುರ ಸರಕಾರ ಅವಕಾಶ ನೀಡಿದೆ.
ಗುರುವಾರ ಹೊರಡಿಸಲಾಗಿರುವ ಅಧಿಸೂಚನೆ ಪ್ರಕಾರ, “ಮೂಲ ನಿವಾಸಿಯಿಂದ ಮೂಲ ನಿವಾಸಿಯಲ್ಲದವರಿಗೆ ಉಡುಗೊರೆ, ಮಾರಾಟ ಅಥವಾ ಅಡಮಾನದ ಮೂಲಕ ಭೂ ವರ್ಗಾವಣೆಯನ್ನು ನೋಂದಣಿ ಮಾಡಲಾಗುವುದಿಲ್ಲ” ಎಂದು ಭೂ ಸಂಪನ್ಮೂಲ ಇಲಾಖೆ ಹೇಳಿದೆ. ಆದರೆ, ಈ ನಿಷೇಧದಲ್ಲಿ ಒಂದು ವಿನಾಯಿತಿಯನ್ನು ನೀಡಲಾಗಿದೆ ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಒಂದು ವೇಳೆ ಮೂಲ ನಿವಾಸಿಗಳಲ್ಲದವರು ಮಣಿಪುರದ ಖಾಯಂ ನಿವಾಸಿಗಳಾಗಿದ್ದರೆ, ಅಂಥವವರಿಗೆ ಮಣಿಪುರದ ಮೂಲ ನಿವಾಸಿಗಳಿಂದ ಉಡುಗೊರೆ, ಮಾರಾಟ ಅಥವಾ ಅಡಮಾನದ ಮೂಲಕ ಭೂ ವರ್ಗಾವಣೆ ನೋಂದಣಿಗೆ ಅವಕಾಶವಿದೆ ಎಂದು ಈ ಅಧಿಸೂಚನೆಯಲ್ಲಿ ವಿನಾಯಿತಿ ನೀಡಲಾಗಿದೆ.
ಈ ಅಧಿಸೂಚನೆ ತಕ್ಷಣದಿಂದಲೇ ಜಾರಿಗೆ ಬಂದಿದೆ.





