MGNREGA ಹಗರಣ: ಗುಜರಾತ್ ಸಚಿವ ಬಚು ಖಬಾದ್ ಪುತ್ರನ ಬಂಧನ

ಬಚು ಖಬಾದ್ ಅವರ ಪುತ್ರ ಬಲವಂತ್ಸಿಂಹ ಖಬಾದ್ | PC : abplive.com
ಅಹಮದಾಬಾದ್: ಗುಜರಾತಿನ ದೇವಗಢ್ ಬರಿಯಾ ಮತ್ತು ಧನ್ಪುರ ತಾಲೂಕುಗಳಲ್ಲಿ 75 ಕೋಟಿ ರೂ.ಗಳ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಹಗರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸಚಿವ ಬಚು ಖಬಾದ್ ಅವರ ಪುತ್ರ ಬಲವಂತ್ಸಿಂಹ ಖಬಾದ್ ಅವರನ್ನು ದಾಹೋದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಚು ಖಬಾದ್ ಅವರು ಪಂಚಾಯತ್ ಮತ್ತು ಕೃಷಿ ರಾಜ್ಯ ಸಚಿವರಾಗಿದ್ದಾರೆ.
ಬಲವಂತ್ಸಿಂಹ ಮತ್ತು ಅವರ ಕಿರಿಯ ಸಹೋದರ ಕಿರಣ್ ದಾಹೋದ್ ನ್ಯಾಯಾಲಯದಿಂದ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹಿಂತೆಗೆದುಕೊಂಡ ಕೆಲವು ದಿನಗಳ ಬಳಿಕ ಈ ಬಂಧನ ನಡೆದಿದೆ.
ʼದಿ ಇಂಡಿಯನ್ ಎಕ್ಸ್ಪ್ರೆಸ್ʼನೊಂದಿಗೆ ಮಾತನಾಡಿದ ದಾಹೋದ್ನ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಭಂಡಾರಿ, ಜಿಲ್ಲಾ ಗ್ರಾಮೀಣಾಭಿವೃದ್ಧಿ ಪ್ರಾಧಿಕಾರದ (DRDA) FIR ಪ್ರಕಾರ, ಪ್ರಾಥಮಿಕ ತನಿಖೆಯು ಹಗರಣದಲ್ಲಿ ಬಲವಂತ್ಸಿಂಹ ಅವರು ಭಾಗಿಯಾಗಿರುವುದು ಪತ್ತೆಯಾದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
"ನಾವು ಪ್ರಾಥಮಿಕ ತನಿಖೆ ನಡೆಸಿದ್ದೇವೆ, MGNREGA ಯೋಜನೆಗಳಿಗೆ ಸರಕುಗಳನ್ನು ಪೂರೈಸುವ ಬಲ್ವಂತ್ಸಿನ್ಹ್ ಖಬಾದ್ ಅವರ ಏಜೆನ್ಸಿಯು ಕೆಲವು ಮೊತ್ತಗಳಿಗೆ ಬಿಲ್ಗಳನ್ನು ನೀಡದೆ ಸಂಪೂರ್ಣ ಸರಕುಗಳ ಪಟ್ಟಿಯನ್ನು ತಲುಪಿಸಿದೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ ಮತ್ತು ದುರುಪಯೋಗದ ನಿಖರವಾದ ಮೊತ್ತವನ್ನು ನಾವು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ," ಎಂದು ಭಂಡಾರಿ ಹೇಳಿದ್ದಾರೆ.
ದಾಹೋದ್ ಜಿಲ್ಲಾ ಪೊಲೀಸರು ಈ ಹಿಂದೆ ಈ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಿದ್ದರು, MGNREGA ಶಾಖೆಯ ಇಬ್ಬರು ಲೆಕ್ಕಪರಿಶೋಧಕರಾದ ಜಯವೀರ್ ನಾಗೋರಿ ಮತ್ತು ಮಹಿಪಾಲ್ಸಿನ್ಹ್ ಚೌಹಾಣ್, ಗ್ರಾಮ ರೋಜ್ಗಾರ್ ಸೇವಕರಾದ ಕುಲದೀಪ್ ಬರಿಯಾ ಮತ್ತು ಮಂಗಲ್ಸಿನ್ಹ್ ಪಟೇಲಿಯಾ, ಮತ್ತು ತಾಂತ್ರಿಕ ಸಹಾಯಕ ಮನೀಶ್ ಪಟೇಲ್ ಬಂಧಿತರು.







