ದೇಶದಲ್ಲಿ ಪ್ರಾಕೃತಿಕ ವಿಪತ್ತು, ಸಂಘರ್ಷದಿಂದ 5 ಲಕ್ಷಕ್ಕೂ ಅಧಿಕ ಜನರು ಸ್ಥಳಾಂತರ : ಐಡಿಎಂಸಿ ವರದಿ
![ದೇಶದಲ್ಲಿ ಪ್ರಾಕೃತಿಕ ವಿಪತ್ತು, ಸಂಘರ್ಷದಿಂದ 5 ಲಕ್ಷಕ್ಕೂ ಅಧಿಕ ಜನರು ಸ್ಥಳಾಂತರ : ಐಡಿಎಂಸಿ ವರದಿ ದೇಶದಲ್ಲಿ ಪ್ರಾಕೃತಿಕ ವಿಪತ್ತು, ಸಂಘರ್ಷದಿಂದ 5 ಲಕ್ಷಕ್ಕೂ ಅಧಿಕ ಜನರು ಸ್ಥಳಾಂತರ : ಐಡಿಎಂಸಿ ವರದಿ](https://www.varthabharati.in/h-upload/2024/05/15/1266758-5.webp)
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ನೆರೆ, ಚಂಡಮಾರುತ, ಭೂಕಂಪ ಹಾಗೂ ಇತರ ವಿಪತ್ತುಗಳ ಕಾರಣದಿಂದ ಭಾರತದಲ್ಲಿ 2023ರಲ್ಲಿ 5 ಲಕ್ಷಕ್ಕೂ ಅಧಿಕ ಜನರು ಆಂತರಿಕ ಸ್ಥಳಾಂತರಗೊಂಡಿದ್ದಾರೆ ಎಂದು ಜಿನೇವಾ ಮೂಲದ ಇಂಟರ್ನಲ್ ಡಿಸ್ಪೇಸ್ಮೆಂಟ್ ಮಾನಿಟರಿಂಗ್ ಸೆಂಟರ್ (ಐಡಿಎಂಸಿ) ಹೇಳಿದೆ.
2022ಕ್ಕೆ ಹೋಲಿಸಿದರೆ, 2023ರಲ್ಲಿ ಭಾರತದಲ್ಲಿ ಸ್ಥಳಾಂತರಗೊಂಡ ಜನರ ಸಂಖ್ಯೆ ತೀವ್ರಗತಿಯಲ್ಲಿ ಇಳಿಕೆಯಾಗಿರುವುದನ್ನು ಐಡಿಎಂಸಿಯ ವಾರ್ಷಿಕ ವರದಿ ‘ಗ್ಲೋಬಲ್ ರಿಪೋರ್ಟ್ ಆನ್ ಇಂಟರ್ನಲ್ ಡಿಸ್ಲೇಸ್ಮೆಂಟ್’ ದಾಖಲಿಸಿದೆ. ಹವಾಮಾನ ಬದಲಾವಣೆ ಕೆಲವು ಅಪಾಯಗಳು ಆಗಾಗ ಹಾಗೂ ತೀವ್ರವಾಗಿ ಸಂಭವಿಸುವಂತೆ ಮಾಡುವ ಮತ್ತು ಸಮುದಾಯಗಳನ್ನು ಹೆಚ್ಚು ದುರ್ಬಲತೆ ದೂಡುವ ಸತ್ಯದ ಕುರಿತು ವರದಿ ಗಮನ ಸೆಳೆದಿದೆ.
ದೇಶದಲ್ಲಿ 2022ರಲ್ಲಿ ಪ್ರಾಕೃತಿಕ ವಿಪತ್ತಿನ ಕಾರಣದಿಂದ 25 ಲಕ್ಷ ಜನರು ಆಂತರಿಕ ಸ್ಥಳಾಂತರಗೊಂಡಿದ್ದಾರೆ. ಇದು 2023ಕ್ಕೆ ಹೋಲಿಸಿದರೆ ತೀವ್ರ ಇಳಿಕೆ. 2023ರಲ್ಲಿ ಪ್ರಾಕೃತಿಕ ವಿಪತ್ತಿನಿಂದ 528,000 ಜನರು ಆಂತರಿಕ ಸ್ಥಳಾಂತರಗೊಂಡಿದ್ದಾರೆ. ಅಲ್ಲದೆ, ಹೆಚ್ಚಾಗಿ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ 2023ರಲ್ಲಿ ಸಂಭವಿಸಿದ ಸಂಘರ್ಷ ಹಾಗೂ ಹಿಂಸಾಚಾರದಿಂದ ಹೆಚ್ಚುವರಿ 67,000 ಜನರು ಸ್ಥಳಾಂತರಗೊಂಡಿದ್ದಾರೆ. ಆದರೆ ಈ ಸಂಖ್ಯೆ 2022ರಲ್ಲಿ 1,000 ಇತ್ತು.
ಭಾರತದಲ್ಲಿ ನೈಸರ್ಗಿಕ ವಿಪತ್ತಿನಿಂದ ಉಂಟಾದ ಸ್ಥಳಾಂತರದಲ್ಲಿ ತೀವ್ರ ಇಳಿಕೆಯಾಗಿದೆ. ಏಳು ವರ್ಷಗಳಲ್ಲಿ ಮೊದಲ ಬಾರಿಗೆ 2023ರ ಮಧ್ಯ ಭಾಗದಲ್ಲಿ ರೂಪುಗೊಂಡ ಎಲ್ ನಿನೋ ಸ್ಥಿತಿಗತಿಗಳು ಹಾಗೂ ಅದು ತಂದಿರುವ ಶುಷ್ಕ ಪರಿಸ್ಥಿತಿ ಇದಕ್ಕೆ ಕಾರಣ. ಎಲ್ನಿನೋ ಸ್ಥಿತಿಗತಿಯಿಂದಾಗಿ ದೇಶದಲ್ಲಿ ಕಡಿಮೆ ಮಳೆ ಬಿದ್ದಿದೆ ಹಾಗೂ ಕಡಿಮೆ ಸಂಖ್ಯೆಯ ಪ್ರವಾಹ-ಸಂಬಂಧಿತ ವಿಪತ್ತುಗಳು ಸಂಭವಿಸಿವೆ ಎಂದು ವರದಿ ಗಮನ ಸೆಳೆದಿದೆ.
ಭಾರತದಲ್ಲಿ ಪ್ರಮುಖ ಆಂತರಿಕ ಸ್ಥಳಾಂತರಕ್ಕೆ ನೆರೆ ಹಾಗೂ 2023 ಜೂನ್ನಲ್ಲಿ ಅಪ್ಪಳಿಸಿದ ತೀವ್ರ ಉಷ್ಣವಲಯದ ಚಂಡಮಾರುತ ಬಿಪೋರ್ಜಾಯ್ ಕಾರಣ. ಬಿಪೋರ್ಜಾಯ್ ಚಂಡಮಾರುತದ ಬಳಿಕ ಗುಜರಾತ್ ಹಾಗೂ ರಾಜಸ್ಥಾನದಲ್ಲಿ 105,000 ಜನರು ಸ್ಥಳಾಂತರಗೊಂಡಿದ್ದಾರೆ. ಆದರೆ, 2008ರಲ್ಲಿ ದಾಖಲೀಕರಣ ಆರಂಭವಾದ ಬಳಿಕ ಭಾರತದಲ್ಲಿ ನೆರೆಯಿಂದ ನಿರ್ವಸಿತರಾದವರ ಸಂಖ್ಯೆ ಅತಿ ಕಡಿಮೆ. ಅದು 352,000. ಸುಮಾರು 91,000 ಜನರ ನಿರ್ವಸತಿಗೆ ಕಾರಣವಾಗಿದ್ದ ಅತಿ ದೊಡ್ಡ ಪ್ರವಾಹ ಅಸ್ಸಾಂನಲ್ಲಿ 2023 ಜೂನ್ನಲ್ಲಿ ಸಂಭವಿಸಿತು.
ನೆರೆ, ಚಂಡಮಾರುತ, ಭೂಕಂಪ, ಕಾಡ್ಗಿಚ್ಚು ಅತಿ ಹೆಚ್ಚು ಸ್ಥಳಾಂತರಕ್ಕೆ ಕಾರಣವಾಗಿದೆ. ನೆರೆ, ಚಂಡಮಾರುತ, ಭೂಕಂಪದಂತಹ ಪ್ರಾಕೃತಿಕ ವಿಪತ್ತು 2023ರಲ್ಲಿ 2 ಕೋಟಿ 64 ಲಕ್ಷ ಜನರ ಸ್ಥಳಾಂತರಕ್ಕೆ ಕಾರಣವಾಗಿದೆ. ಇದು ಕಳೆದ 10 ವರ್ಷಗಳಲ್ಲಿ ಮೂರನೇ ಅತಿ ಹೆಚ್ಚು ವಾರ್ಷಿಕ ಮೊತ್ತ ಎಂದು ವರದಿ ಹೇಳಿದೆ.