ಪಾಟ್ನಾ ನ್ಯಾಯಾಲಯದ ಆವರಣದಲ್ಲಿ ಕೊಲೆ ಆರೋಪಿಯ ಗುಂಡಿಟ್ಟು ಹತ್ಯೆ
Photo : ANI
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ದಾನಾಪುರ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಇಬ್ಬರು ವ್ಯಕ್ತಿಗಳು ವಿಚಾರಣಾಧೀನ ಕೈದಿಯೊಬ್ಬನನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಮೃತ ಅಭಿಶೇಕ್ ಕುಮಾರ್ ಯಾನೆ ಛೋಟೇ ಸರ್ಕಾರ್ ಕೊಲೆ ಆರೋಪದಲ್ಲಿ ಸುಮಾರು ಒಂದು ವರ್ಷದಿಂದ ಪಾಟ್ನಾದ ಬೇವೂರ್ ಜೈಲಿನಲ್ಲಿದ್ದನು.
‘‘ನ್ಯಾಯಾಲಯದಲ್ಲಿ ಹಾಜರುಪಡಿಸಲು ಅಭಿಶೇಕ್ ಕುಮಾರ್ನನ್ನು ಕರೆದೊಯ್ಯುತ್ತಿದ್ದಾಗ ಒಬ್ಬ ಆಕ್ರಮಣಕಾರಿಯು ಅವನತ್ತ ಗುಂಡು ಹಾರಿಸಿದನು’’ ಎಂದು ಪಾಟ್ನಾದ ಹಿರಿಯ ಪೊಲೀಸ್ ಸೂಪರಿಂಟೆಂಡೆಂಡ್ ರಾಜೀವ್ ಮಿಶ್ರಾ ತಿಳಿಸಿದರು. ‘‘ಆದರೆ, ಆತನನ್ನು ಓರ್ವ ಶಸ್ತ್ರದಾರಿ ಕಾನ್ಸ್ಟೇಬಲ್ ತಡೆದರು. ಆದರೆ, ಗುಂಪಿನಲ್ಲಿದ್ದ ಇನ್ನೊಬ್ಬ ಆಕ್ರಮಣಕಾರಿಯು ಅಭಿಶೇಕ್ ಕುಮಾರ್ನತ್ತ ಗುಂಡು ಹಾರಿಸಿದನು’’ ಎಂದರು.
ಆಕ್ರಮಣಕಾರರ ಪೈಕಿ ಒಬ್ಬನಿಗೆ ಗುಂಡಿನ ಗಾಯವಾಗಿದೆ ಹಾಗೂ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಆಕ್ರಮಣಕಾರಿಗಳು ಮಿರ್ಝಾಪುರದವರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಅಭಿಶೇಕ್ ಕುಮಾರ್ ಎಂಟು ಕೊಲೆ ಪ್ರಕರಣಗಳು, ಎರಡು ಸುಲಿಗೆ ಪ್ರಕರಣಗಳು, ಮೂರು ಶಸ್ತ್ರ ಕಾಯ್ದೆ ಪ್ರಕರಣಗಳು ಮತ್ತು ಇತರ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
2019ರಲ್ಲಿ, ದಾನಾಪುರ ನ್ಯಾಯಾಲಯದ ಆವರಣದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರು ಮತ್ತು ಇನ್ನೊಬ್ಬರು ಗಾಯಗೊಂಡಿದ್ದರು.