ಗಂಗಾನದಿಯಲ್ಲಿ ಸ್ನಾನ ಮಾಡಿದ ನಂತರ ನನ್ನ ಜೀವನ ಬದಲಾಗಿದೆ, ನಾನೀಗ ಸಸ್ಯಾಹಾರಿಯಾಗಿದ್ದೇನೆ: ಉಪ ರಾಷ್ಟ್ರಪತಿ ರಾಧಾಕೃಷ್ಣನ್

Screengrab:X/@VPIndia
ವಾರಣಾಸಿ: “ನಾನು 25 ವರ್ಷಗಳ ಹಿಂದೆ ಕಾಶಿಗೆ ಭೇಟಿ ನೀಡಿದ್ದಾಗ, ನಾನು ಮಾಂಸಾಹಾರಿಯಾಗಿದ್ದೆ. ಆದರೆ, ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ, ನನ್ನ ಜೀವನದಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ನಾನೀಗ ಸಸ್ಯಾಹಾರಿ ಆಗಿದ್ದೇನೆ” ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದ್ದಾರೆ.
ವಾರಣಾಸಿಯಲ್ಲಿನ ಶ್ರೀ ಕಾಶಿ ನಟ್ಟುಕ್ಕೋಟ್ಟೈ ನಗರ ಸತ್ರಂ ಆಡಳಿತ ಮಂಡಳಿಯು ನೂತನವಾಗಿ ನಿರ್ಮಿಸಿರುವ ವಸತಿ ಸೌಕರ್ಯವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
“ಧರ್ಮ ತಾತ್ಕಾಲಿಕವಾಗಿ ಬಿಕ್ಕಟ್ಟು ಎದುರಿಸಬಹುದು. ಆದರೆ, ಅದೆಂದೂ ಶಾಶ್ವತವಲ್ಲ. ಈ ಕಟ್ಟಡ ಅದಕ್ಕೆ ಸಾಕ್ಷಿಯಾಗಿದೆ. ನಾನು 25 ವರ್ಷಗಳ ಹಿಂದೆ ಕಾಶಿಗೆ ಬಂದಾಗ, ನಾನು ಮಾಂಸಾಹಾರಿಯಾಗಿದ್ದೆ. ಆದರೆ, ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ, ನನ್ನ ಜೀವನದಲ್ಲಿ ಅದೆಷ್ಟು ಬದಲಾವಣೆಯಾಗಿದೆಯೆಂದರೆ, ನಾನು ಸಸ್ಯಾಹಾರವನ್ನು ಅಳವಡಿಸಿಕೊಂಡಿದ್ದೇನೆ” ಎಂದು ಅವರು ಹೇಳಿದ್ದಾರೆ.
ಕಾಶಿಯಲ್ಲಿನ ಪರಿವರ್ತನೆಯತ್ತ ಬೊಟ್ಟು ಮಾಡಿದ ಸಿ.ಪಿ.ರಾಧಾಕೃಷ್ಣನ್, “ನಾನು 25 ವರ್ಷಗಳ ಹಿಂದೆ ಭೇಟಿ ನೀಡಿದ್ದ ಕಾಶಿಯಂತೆ ಈಗಿನ ಕಾಶಿ ಇಲ್ಲ. ಈ ಬದಲಾವಣೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರಿಂದ ಮಾತ್ರ ಸಾಧ್ಯವಾಗಿದೆ” ಎಂದು ಶ್ಲಾಘಿಸಿದ್ದಾರೆ.
ವಸತಿ ಸೌಕರ್ಯಗಳ ಉದ್ಘಾಟನೆಯ ಬಳಿಕ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ಉಪ ರಾಷ್ಟ್ರಪತಿ ರಾಧಾಕೃಷ್ಣನ್, ಎಲ್ಲರ ಶಾಂತಿ, ಸಮೃದ್ಧಿ ಹಾಗೂ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣದೊಳಗಿರುವ ಅನ್ನಪೂರ್ಣಿ ಅಮ್ಮನ್ ದೇವಿ ಮಂದಿರದಲ್ಲೂ ಅವರು ಪ್ರಾರ್ಥನೆ ಸಲ್ಲಿಸಿದರು.







