ಪ್ರತ್ಯೇಕತವಾದಿಗಳಿಗೆ ಬೆಂಬಲ ನೀಡಿದ ಆರೋಪ: ಕೆನಡಿಯನ್ ಗಾಯಕ ಶುಭ್ ಭಾರತ ಪ್ರವಾಸ ರದ್ದು

ಗಾಯಕ ಶುಭ್ನೀತ್ ಸಿಂಗ್ (Photo credit: instagram)
ಹೊಸದಿಲ್ಲಿ: ಖಲಿಸ್ತಾನ್ ಮತ್ತು ಪ್ರತ್ಯೇಕತಾವಾದಿಗಳಿಗೆ ಬೆಂಬಲಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಂಜಾಬಿ-ಕೆನಡಾದ ಗಾಯಕ ಶುಭ್ನೀತ್ ಸಿಂಗ್ ಅವರ ಭಾರತ ಪ್ರವಾಸವನ್ನು ರದ್ದುಗೊಳಿಸಲಾಗಿದೆ.
ಶುಭ್ನೀತ್ ಸಿಂಗ್ ಅವರು ಭಾರತದಾದ್ಯಂತ ಹಲವಾರು ನಗರಗಳಲ್ಲಿ ಸಂಗೀತ ಪ್ರದರ್ಶನ ನೀಡಬೇಕಿತ್ತು. ಆದರೆ, ಪ್ರತ್ಯೇಕತಾವಾದಿ ನಾಯಕ ನಿಜ್ಜರ್ ಸಿಂಗ್ನನ್ನು ಹತ್ಯೆ ಮಾಡಿರುವುದರ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಆರೋಪಿಸಿದ ಬಳಿಕ ಉಂಟಾಗಿರುವ ಉಭಯ ದೇಶಗಳ ಬಿಕ್ಕಟ್ಟಿನ ನಡುವೆ ಶುಭ್ನಿತ್ ಭಾರತದ ತಿರುಚಿದ ನಕ್ಷೆಯನ್ನು ಹಂಚಿಕೊಂಡಿದ್ದರು.
ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಜಮ್ಮು ಕಾಶ್ಮೀರ ಹಾಗೂ ಪಂಜಾಬ್ ಭಾಗಗಳನ್ನು ತಿರುಚಿದ ನಕಾಶೆಯನ್ನು ಹಂಚಿಕೊಂಡಿರುವ ಗಾಯಕ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಬೆನ್ನಲ್ಲೇ ನಟ್ಟಿಗರು ಗಾಯಕನ ಸಂಗೀತ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ್ದರು, ಇದೀಗ ಬುಕ್ ಮೈಶೋ ಸಂಗೀತ ಪ್ರದರ್ಶನ ಕಾರ್ಯಕ್ರಮವನ್ನು ರದ್ದು ಪಡಿಸಿದೆ. ಟಿಕೆಟ್ ಖರೀದಿಸಿದವರಿಗೆ ಮರುಪಾವತಿ ನೀಡಲಾಗುತ್ತದೆ ಎಂದು ಬುಕ್ ಮೈಶೋ ಹೇಳಿದೆ.
ಅದಕ್ಕೂ ಮುನ್ನ, ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದ್ದ boAt ಕಂಪೆನಿಯು ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು.







