ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನಾನುಕೂಲ: ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ: ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ವಿಂಗಡಣೆಯಿಂದ ತನ್ನ ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಿರುವ ದಕ್ಷಿಣ ಭಾರತಕ್ಕೆ ಸಂಸತ್ತಿನಲ್ಲಿ ಸೋಲಾಗಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಬೆಟ್ಟು ಮಾಡಿದೆ ಎಂದು barandbench.com ವರದಿ ಮಾಡಿದೆ.
ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆಯಾಗುತ್ತಿದ್ದರೆ ಉತ್ತರ ಭಾರತದಲ್ಲಿ ಕುಟುಂಬಗಳು ದೊಡ್ಡದಾಗುತ್ತಿವೆ ಎಂದು ಅದು ಹೇಳಿದೆ.
ಸಂತಾನೋತ್ಪತ್ತಿ ಚಿಕಿತ್ಸೆ ವಿಫಲಗೊಂಡ ಬಳಿಕ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಹಕ್ಕನ್ನು ಕೋರಿ ಕೆಲವು ಪೋಷಕರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಸತೀಶಚಂದ್ರ ಶರ್ಮಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಒಂದು ಪ್ರಕರಣದಲ್ಲಿ ಈಗಾಗಲೇ ಸಹಜ ಹೆರಿಗೆಯ ಮೂಲಕ ಮಗುವನ್ನು ಹೊಂದಿರುವ ಪೋಷಕರು ಎರಡನೇ ಮಗುವನ್ನು ಪಡೆಯಲು ಪರ್ಯಾಯ ಮಾರ್ಗವನ್ನು ಅನ್ವೇಷಿಸುತ್ತಿರುವುದನ್ನು ಗಮನಿಸಿದ ನ್ಯಾ.ನಾಗರತ್ನಾ,‘ಒಂದು ಮಗುವನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಆದರೆ ಮೊದಲ ಮಗು ಸಾಮಾನ್ಯವಾಗಿ ಜನಿಸಿದೆ ಮತ್ತು ಈಗ ಇನ್ ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಎರಡನೇ ಮಗು? ದಕ್ಷಿಣ ಭಾರತವನ್ನು ನೋಡಿ,ಅಲ್ಲಿ ಕುಟುಂಬಗಳ ಗಾತ್ರ ಕಡಿಮೆಯಾಗುತ್ತಿದೆ. ಕ್ಷೇತ್ರ ಪುನರ್ವಿಂಗಡಣೆ ವಿಷಯದಲ್ಲಿ ಇದೇ ಸಮಸ್ಯೆಯಾಗಿರುವುದು. ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆಯಾಗುತ್ತಿದೆ,ಆದರೆ ಉತ್ತರ ಭಾರತದಲ್ಲಿ ಕುಟುಂಬಗಳು ದೊಡ್ಡದಾಗಿ ಬೆಳೆಯುತ್ತಿವೆ’ ಎಂದು ಹೇಳಿದರು.
ಈ ನಡುವೆ ಅರ್ಜಿದಾರರ ಪರ ವಕೀಲರು, ಐವಿಎಫ್ ಮೇಲೆ ಯಾವುದೇ ಕಡಿವಾಣವಿಲ್ಲವಾದರೂ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ನಿರ್ಬಂಧಗಳಿವೆ ಎಂದು ಹೇಳಿದರು. ಆದರೂ, ಚಿತ್ರರಂಗದಲ್ಲಿಯ ಜನರಿಂದಾಗಿ ಬಾಡಿಗೆ ತಾಯ್ತನವು ಫ್ಯಾಷನ್ ಆಗಿಬಿಟ್ಟಿದೆ ಎಂದು ನ್ಯಾಯಾಲಯವು ಹೇಳಿತು. ಸಂವಿಧಾನದ ವಿಧಿ 21 ಕೂಡ ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿದೆ. ಈ ಚಿತ್ರರಂಗದ ಜನರಿಂದಾಗಿ ಇದು( ಬಾಡಿಗೆ ತಾಯ್ತನ) ಫ್ಯಾಷನ್ ಆಗಿದೆ ಎಂದು ನ್ಯಾ.ನಾಗರತ್ನಾ ಹೇಳಿದರು.
ಪ್ರಕರಣದ ಮುಂದಿನ ವಿಚಾರಣೆಯು ಜು.22ರಂದು ನಡೆಯಲಿದೆ.