ಛತ್ತೀಸ್ಗಢ | ಜಾಮೀನಿನ ಬೆನ್ನಲ್ಲೇ ಮತಾಂತರ ಆರೋಪದಲ್ಲಿ ಬಂಧಿತ ಕೇರಳದ ಇಬ್ಬರು ಸನ್ಯಾಸಿನಿಯರು ಜೈಲಿನಿಂದ ಬಿಡುಗಡೆ
ಕಾರಾಗೃಹದ ಹೊರಗೆ ಬರಮಾಡಿಕೊಂಡ ಎಲ್ಡಿಎಫ್, ಬಿಜೆಪಿ ನಾಯಕರು

Photo : X/@ANI
ಬಿಲಾಸಪುರ: ಮಾನವ ಕಳ್ಳಸಾಗಣೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪದಲ್ಲಿ ಬಂಧಿತ ಕೇರಳದ ಇಬ್ಬರು ಸನ್ಯಾಸಿನಿಯರು ಜಾಮೀನಿನ ಬಳಿಕ ದುರ್ಗ್ ಕೇಂದ್ರ ಕಾರಾಗೃಹದಿಂದ ಹೊರ ಬಂದಿದ್ದಾರೆ.
ಕ್ಯಾಥೋಲಿಕ್ ಸನ್ಯಾಸಿನಿಗಳಾದ ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಅವರನ್ನು ಎಲ್ಡಿಎಫ್ ಸಂಸದರು ಮತ್ತು ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ ಸೇರಿದಂತೆ ಕೇರಳದ ಹಲವು ನಾಯಕರು ಜೈಲಿನ ಹೊರಗೆ ಬರಮಾಡಿಕೊಂಡರು.
ಶನಿವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ(ಎನ್ಐಎ ನ್ಯಾಯಾಲಯ) ಸಿರಾಜುದ್ದೀನ್ ಖುರೇಷಿ ಇಬ್ಬರು ಸನ್ಯಾಸಿನಿಯರಾದ ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಮತ್ತು ಸುಖಮನ್ ಮಾಂಡವಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.
ಪಾಸ್ಪೋರ್ಟ್ಗಳನ್ನು ಶರಣಾಗಿಸಬೇಕು ಮತ್ತು ದೇಶವನ್ನು ಬಿಟ್ಟು ಹೋಗಬಾರದು ಎಂದು ನ್ಯಾಯಾಲಯ ಜಾಮೀನಿನ ವೇಳೆ ಷರತ್ತು ವಿಧಿಸಿದೆ. ಇಬ್ಬರು ಶ್ಯೂರಿಟಿಗಳೊಂದಿಗೆ ತಲಾ 50,000 ರೂ.ಗಳ ಬಾಂಡ್ ಅನ್ನು ಸಲ್ಲಿಸಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂದು ಹೇಳಿದೆ.
ಬಲಪಂಥೀಯ ಸಂಘಟನೆಯೊಂದರ ಕಾರ್ಯಕರ್ತರ ದೂರಿನ ಮೇರೆಗೆ ಜು.25ರಂದು ದುರ್ಗ ರೈಲು ನಿಲ್ದಾಣದಲ್ಲಿ ರೈಲ್ವೆ ಪೋಲಿಸರು ಈ ಮೂವರನ್ನು ಬಂಧಿಸಿದ್ದರು. ಅವರು ನಾರಾಯಣಪುರದ ಮೂವರು ಮಹಿಳೆಯರನ್ನು ಬಲವಂತದಿಂದ ಮತಾಂತರಿಸಿದ್ದಾರೆ ಮತ್ತು ಅವರನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.







