ಜ್ಞಾನವಾಪಿ ಮಸೀದಿ ಸಮೀಕ್ಷೆಯ ನೇತೃತ್ವ ವಹಿಸಿದ್ದ ಎಎಸ್ಐ ಅಧಿಕಾರಿ ನಿವೃತ್ತಿ; ಬೇರೊಂದು ಹುದ್ದೆಗೆ ನೇಮಕ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕಳೆದ ವರ್ಷ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ನಡೆಸಿದ್ದ ತಂಡದ ನೇತೃತ್ವ ವಹಿಸಿದ್ದ ಪುರಾತತ್ವಶಾಸ್ತ್ರಜ್ಞ ಅಲೋಕ ತ್ರಿಪಾಠಿಯವರು ಆಗಸ್ಟ್ನಲ್ಲಿ 60 ವರ್ಷ ತುಂಬಿದ ಬಳಿಕ ಭಾರತೀಯ ಪುರಾತತ್ವ ಸರ್ವೆಯ(ಎಎಸ್ಐ) ಹೆಚ್ಚುವರಿ ಮಹಾನಿರ್ದೇಶಕ(ಪುರಾತತ್ವ) ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಆದರೆ ಸಂಪುಟ ನೇಮಕಾತಿ ಸಮಿತಿ(ಎಸಿಸಿ)ಯ ಪೂರ್ವಾನ್ವಯ ಅನುಮೋದನೆಗೆ ಒಳಪಟ್ಟು ಮೂರು ತಿಂಗಳು ಸೇವಾ ವಿಸ್ತರಣೆಯ ಬಳಿಕ ಎಎಸ್ಐನಲ್ಲಿ ಎಡಿಜಿ(ಸಂಶೋಧನೆ ಮತ್ತು ತರಬೇತಿ-ಸಾಮರ್ಥ್ಯ ನಿರ್ಮಾಣ) ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಎಸಿಸಿಯು ತ್ರಿಪಾಠಿ ಅವರಿಂದ ತೆರವಾಗಿದ್ದ ಎಡಿಜಿ(ಪುರಾತತ್ವ) ಹುದ್ದೆಗೆ ಟಿ.ಜೆ.ಅಲೋನ್ ನೇಮಕವನ್ನು ಅನುಮೋದಿಸಿದೆ.
ಸಿಲ್ಚಾರ್ನ ಅಸ್ಸಾಂ ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ತ್ರಿಪಾಠಿ 2021ರಲ್ಲಿ ಡೆಪ್ಯುಟೇಷನ್ನಲ್ಲಿ ಎಎಸ್ಐಗೆ ನೇಮಕಗೊಂಡಿದ್ದರು. ಅವರು ಆ.31ರಂದು 60 ವರ್ಷಗಳ ನಿವೃತ್ತಿ ವಯಸ್ಸು ತಲುಪುವವರೆಗೆ ಅವರಿಗೆ ಎಡಿಜಿ(ಪುರಾತತ್ವ) ಹುದ್ದೆಯಲ್ಲಿ ನಾಲ್ಕು ಸಲ ಸೇವಾ ವಿಸ್ತರಣೆಯನ್ನು ನೀಡಲಾಗಿತ್ತು.
ಆ.29ರಂದು ಎಎಸ್ಐ ತ್ರಿಪಾಠಿಯವರ ನಿವೃತ್ತಿಯ ಬಳಿಕ ಅವರ ಡೆಪ್ಯುಟೇಷನ್ ಅವಧಿಯನ್ನು ನ.30,2025ರವರೆಗೆ ವಿಸ್ತರಿಸಿ ಹೊಸ ಹುದ್ದೆಗೆ ನೇಮಕಗೊಳಿಸಿದೆ. ಇದನ್ನು ಎಸಿಸಿ ಪೂರ್ವಾನ್ವಯವಾಗಿ ದೃಢೀಕರಿಸಬೇಕಿದೆ.
ತ್ರಿಪಾಠಿಯವರು ಉದ್ಯೋಗಿಯಾಗಿರುವ ಅಸ್ಸಾಂ ವಿವಿಯಲ್ಲಿ ನಿವೃತ್ತಿ ವಯಸ್ಸು 60 ಅಲ್ಲ, 65 ವರ್ಷಗಳು. ಹೀಗಾಗಿ ಅವರನ್ನು ಖಾಲಿಯಿದ್ದ ಎಡಿಜಿ(ಸಂಶೋಧನೆ ಮತ್ತು ತರಬೇತಿ-ಸಾಮರ್ಥ್ಯ ನಿರ್ಮಾಣ) ಹುದ್ದೆಗೆ ಮೂರು ತಿಂಗಳ ಅವಧಿಗೆ ನೇಮಕಗೊಳಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು indianexpress.comಗೆ ತಿಳಿಸಿದ್ದಾರೆ.
ಸೇವಾ ನಿಯಮ ಉಲ್ಲಂಘನೆ?:
ಮುಂದಿನ ಮೂರು ತಿಂಗಳುಗಳ ಕಾಲ ತ್ರಿಪಾಠಿ ವಹಿಸಿಕೊಳ್ಳಲಿರುವ ಹುದ್ದೆಯು ನಿರ್ದಿಷ್ಟ ನೇಮಕಾತಿ ನಿಯಮಗಳನ್ನು ಹೊಂದಿದೆ. ಈ ಹುದ್ದೆಗೆ ಡೆಪ್ಯುಟೇಷನ್ ಮೂಲಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 56 ವರ್ಷಗಳು ಎಂದು ಎಪ್ರಿಲ್ 22-28,2023ರ ಎಂಪ್ಲೊಯ್ಮೆಂಟ್ ನ್ಯೂಸ್ನಲ್ಲಿಯ ಎಎಸ್ಐ ಜಾಹೀರಾತಿನಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ ತ್ರಿಪಾಠಿ ಎಸಿಸಿ ಅನುಮೋದನೆಗೆ ಮೊದಲೇ 60ರ ವಯಸ್ಸಿನಲ್ಲಿ ಈ ಹುದ್ದೆಗೆ ನೇಮಕಗೊಂಡಿದ್ದಾರೆ!
ಪ್ರಸ್ತುತ ನಿಯಮಗಳ ಪ್ರಕಾರ ಈ ಹುದ್ದಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿತ್ತು, ಆದರೆ ಆಯ್ಕೆಯಾಗಿದ್ದ ಅಭ್ಯರ್ಥಿಗೆ ಕಾರಣಾಂತರದಿಂದ ಹುದ್ದೆಗೆ ಸೇರಲು ಸಾಧ್ಯವಾಗಿಲ್ಲ. ಹೀಗಾಗಿ ಹುದ್ದೆಯನ್ನು ಖಾಲಿ ಬಿಡುವ ಬದಲು ತ್ರಿಪಾಠಿಯವರನ್ನು ಮೂರು ತಿಂಗಳ ಅವಧಿಗೆ ಡೆಪ್ಯುಟೇಷನ್ನಲ್ಲಿ ನೇಮಕಗೊಳಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯದಲ್ಲಿನ ಮೂಲಗಳು ಸಮಜಾಯಿಷಿ ನೀಡಿವೆ.







