ಪ್ರಧಾನಿ ಮೋದಿಯ ನಾಶಿಕ್ ಭೇಟಿಗೂ ಮುನ್ನ ಈರುಳ್ಳಿ ಬೆಳೆಗಾರರನ್ನು ವಶಕ್ಕೆ ಪಡೆದ ಪೊಲೀಸರು
![ಪ್ರಧಾನಿ ಮೋದಿಯ ನಾಶಿಕ್ ಭೇಟಿಗೂ ಮುನ್ನ ಈರುಳ್ಳಿ ಬೆಳೆಗಾರರನ್ನು ವಶಕ್ಕೆ ಪಡೆದ ಪೊಲೀಸರು ಪ್ರಧಾನಿ ಮೋದಿಯ ನಾಶಿಕ್ ಭೇಟಿಗೂ ಮುನ್ನ ಈರುಳ್ಳಿ ಬೆಳೆಗಾರರನ್ನು ವಶಕ್ಕೆ ಪಡೆದ ಪೊಲೀಸರು](https://www.varthabharati.in/h-upload/2024/05/16/1266887-9.webp)
ಸಾಂದರ್ಭಿಕ ಚಿತ್ರ | PC : PTI
ನಾಶಿಕ್: ಪ್ರಧಾನಿ ನರೇಂದ್ರ ಮೋದಿಯವರ ನಾಶಿಕ್ ಭೇಟಿಗೂ ಮುನ್ನ, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ನಾಯಕರು ಸೇರಿದಂತೆ 50ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದು, ಅವರನ್ನು ನಾಶಿಕ್ ನ ವಿವಿಧ ಪೊಲೀಸ್ ಠಾಣೆಗಳಲ್ಲಿರಿಸಲಾಗಿತ್ತು. ಕಳೆದ ಒಂದು ವರ್ಷದಲ್ಲಿ ರಫ್ತು ದರಗಳ ಕುರಿತು ಕೇಂದ್ರ ಸರಕಾರವು ಕೈಗೊಂಡಿರುವ ಕಳಪೆ ಹಾಗೂ ರಚನಾತ್ಮಕವಲ್ಲದ ನಿರ್ಧಾರಗಳ ವಿರುದ್ಧ ಪ್ರತಿಭಟಿಸಲು ಈರುಳ್ಳಿ ಬೆಳೆಗಾರರು ಹಾಗೂ ವಿರೋಧ ಪಕ್ಷಗಳು ನಿರ್ಧರಿಸಿದ್ದವು.
ಬುಧವಾರ ಬೆಳಗ್ಗೆ 7 ಗಂಟೆಯಿಂದ ನಾಶಿಕ್ ಜಿಲ್ಲೆಯಲ್ಲಿನ ಸಂಬಂಧಪಟ್ಟ ತಾಲ್ಲೂಕುಗಳು ಹಾಗೂ ಗ್ರಾಮಗಳಲ್ಲಿ ರೈತರನ್ನು ವಶದಲ್ಲಿರಿಸಿಕೊಳ್ಳಲಾಗಿತ್ತು ಹಾಗೂ ಸಂಜೆ 5 ಗಂಟೆಯ ನಂತರವಷ್ಟೆ ಅವರನ್ನೆಲ್ಲ ಬಿಡುಗಡೆ ಮಾಡಲಾಯಿತು.
ಮಹಾರಾಷ್ಟ್ರ ರಾಜ್ಯ ಕಾಂಡ ಉತ್ಪಾದಕ್ ಶೇತ್ಕಾರಿ ಸಂಘಟನೆಯಲ್ಲಿ ಸುಮಾರು 3.5 ಲಕ್ಷದಷ್ಟು ನೋಂದಾಯಿತ ಈರುಳ್ಳಿ ಬೆಳೆಗಾರರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಘಟನೆಯ ಅಧ್ಯಕ್ಷ ಭರತ್ ದಿಘೋಲೆ, “ಆಗಸ್ಟ್ 19, 2023ರಂದು ಈರುಳ್ಳಿಯ ರಫ್ತಿನ ಮೇಲೆ ಕೇಂದ್ರ ಸರಕಾರವು ಶೇ. 40ರಷ್ಟು ಸುಂಕವನ್ನು ವಿಧಿಸಿತು. ಅಕ್ಟೋಬರ್ 28, 2023ರಂದು ರಫ್ತುದಾರರು ಪ್ರತಿ ಟನ್ ಈರುಳ್ಳಿಗೆ ಸರಕಾರಕ್ಕೆ ಪಾವತಿಸಬೇಕಿದ್ದ 800 ಡಾಲರ್ ಜಾಗದಲ್ಲಿ ಹೊಸ ನಿರ್ಣಯವನ್ನು ಕೈಗೊಳ್ಳಲಾಯಿತು. ಇದಾದ ನಂತರ, ಡಿಸೆಂಬರ್ 7, 2023ರಂದು ಆದೇಶವೊಂದನ್ನು ಹೊರಡಿಸಿದ್ದ ವಿದೇಶಿ ವ್ಯಾಪಾರ ಪ್ರಧಾನ ನಿರ್ದೇಶನಾಲಯವು, ಮಾರ್ಚ್ 31, 2024ರವರೆಗೆ ಈರುಳ್ಳಿಯನ್ನು ನಿರ್ಬಂಧದಿಂದ ಮುಕ್ತಗೊಳಿಸಲು ರಫ್ತು ನೀತಿಯನ್ನು ತಿದ್ದುಪಡಿ ಮಾಡಲಾಗುವುದು ಎಂದು ಘೋಷಿಸಿತು” ಎಂದು ಹೇಳಿದ್ದಾರೆ.
“ಆದರೆ, ಮಾರ್ಚ್ ತಿಂಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ವಿದೇಶಿ ವ್ಯಾಪಾರ ಪ್ರಧಾನ ನಿರ್ದೇಶನಾಲಯವು ಮುಂದಿನ ಸೂಚನೆಯವರೆಗೆ ಈರುಳ್ಳಿ ರಫ್ತು ಮೇಲಿನ ನಿಷೇಧವು ಮುಂದುವರಿಯಲಿದೆ ಎಂದು ಹೇಳಿಕೆ ಬಿಡುಗಡೆ ಮಾಡಿತು. ಮೇ 4, 2024ರಂದು ನಿಷೇಧವನ್ನು ತೆರವುಗೊಳಿಸಲಾಯಿತಾದರೂ, ಆಯ್ದ ನಿಯಮ ಮತ್ತು ಷರತ್ತುಗಳನ್ನು ವಿಧಿಸಲಾಯಿತು. ಈಗ ರಫ್ತುದಾರರು ಸರಕಾರಕ್ಕೆ ಪ್ರತಿ ಮೆಟ್ರಿಕ್ ಈರುಳ್ಳಿಗೆ 550 ಡಾಲರ್ ಪಾವತಿಸಲೇಬೇಕಿದೆ” ಎಂದು ನಿರಂತರವಾಗಿ ಬದಲಾಗುತ್ತಿರುವ ರಫ್ತು ನೀತಿಯತ್ತ ಅವರು ಬೊಟ್ಟು ಮಾಡಿದ್ದಾರೆ.
ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರರು 50ಕ್ಕೂ ಹೆಚ್ಚು ದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡುತ್ತಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಈರುಳ್ಳಿ ರಫ್ತಿಗೆ ನಿಷೇಧ ಹೇರಿದೆ. ಇದರಿಂದ ಈರುಳ್ಳಿ ದರವು ಗಣನೀಯವಾಗಿ ಕುಸಿತಗೊಂಡಿರುವುದರಿಂದ ಈರುಳ್ಳಿ ಬೆಳೆಗಾರರು ಕೇಂದ್ರ ಸರಕಾರದ ವಿರುದ್ಧ ಕಳೆದ ಕೆಲವು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.