ಆಪರೇಷನ್ ಸಿಂಧೂರ | ಪಂಜಾಬ್ ಗಡಿ ಜಿಲ್ಲೆಗಳಲ್ಲಿ ಆತಂಕದಲ್ಲಿ ರಾತ್ರಿ ಕಳೆದ ನಾಗರಿಕರು

ಸಾಂದರ್ಭಿಕ ಚಿತ್ರ | PC : PTI
ಚಂಡಿಗಢ: ಭಾರತ ಹಾಗೂ ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಪಂಜಾಬ್ ಆಡಳಿತ ಸಂಪೂರ್ಣ ಬ್ಲಾಕೌಟ್ ಜಾರಿಗೊಳಿಸಿರುವುದರಿಂದ ಅಮೃತಸರ, ಪಠಾಣ್ಕೋಟ್ ಹಾಗೂ ಫಿರೋಝ್ಪುರ ಸೇರಿದಂತೆ ಪಂಜಾಬ್ ನ ಗಡಿ ಜಿಲ್ಲೆಗಳ ನಿವಾಸಿಗಳು ಗುರುವಾರ ರಾತ್ರಿಯನ್ನು ಆತಂಕದಿಂದ ಕಳೆದರು.
ಚಂಡಿಗಢದಲ್ಲಿ ಮಧ್ಯರಾತ್ರಿ ವರೆಗೆ 2 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸುವುದರೊಂದಿಗೆ ಜಲಾಂಧರ್, ಗುರುದಾಸ್ಪುರ, ಹೋಶಿಯಾರ್ಪುರ ಹಾಗೂ ಇತರ ವಲಯಗಳಲ್ಲಿ ಕೂಡ ಬ್ಲಾಕೌಟ್ ಜಾರಿಗೊಳಿಸಲಾಗಿತ್ತು. ಪಾಕಿಸ್ತಾನದಿಂದ ಗುರುವಾರ ರಾತ್ರಿ ಹೊಸ ದಾಳಿ ಪ್ರಯತ್ನದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.
ಜಮ್ಮು, ಪಠಾಣ್ ಕೋಟ್ ಹಾಗೂ ಉಧಮ್ಪುರ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ಸೇನಾ ನೆಲಗಳನ್ನು ಗುರಿಯಾಗಿರಿಸಿ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಬಳಸಿ ಪಾಕಿಸ್ತಾನ ಸಂಘಟಿತ ಆಕ್ರಮಣ ನಡೆಸಿದೆ. ಭಾರತೀಯ ಸೇನೆ ಈ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ದಾಳಿಯಲ್ಲಿ ಗುರಿ ಮಾಡಲಾದ ಸ್ಥಳಗಳಲ್ಲಿ ಉತ್ತರ ಹಾಗೂ ಪಶ್ಚಿಮ ಭಾರತದ 15 ನಗರಗಳು ಸೇರಿವೆ. ಅವುಗಳಲ್ಲಿ ಶ್ರೀನಗರ, ಅಮೃತಸರ, ಕಪುರ್ತಲಾ, ಜಲಾಂಧರ್, ಲುಧಿಯಾನ, ಆದಂಪುರ, ಬಠಿಂಡಾ, ಚಂಡಿಗಢ, ನಲ್, ಫಾಲೊಡಿ, ಉತ್ತರ್ಲಾಯಿ ಹಾಗೂ ಭುಜ್ ಮುಖ್ಯವಾದವು.
ಭಾರತದ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಕೇವಲ ಒಂದು ದಿನದ ಬಳಿಕ ಪಾಕಿಸ್ತಾನ ಈ ದಾಳಿಯ ಪ್ರಯತ್ನ ನಡೆಸಿದೆ.