ಐದು ದಿನಗಳಲ್ಲಿ 170ಕ್ಕೂ ಅಧಿಕ ಕನ್ವಾರಿಯಾಗಳ ವಿರುದ್ಧ ಗೂಂಡಾಗಿರಿ, ಗಲಭೆ ಆರೋಪದಲ್ಲಿ ಪ್ರಕರಣ ದಾಖಲು!
ಯಾತ್ರಿಕರು ಆಧ್ಯಾತ್ಮಿಕ ಪಾವಿತ್ರ್ಯತೆ ಕಾಪಾಡಬೇಕು ಎಂದ ಎಬಿಎಪಿ

Screengrab: X/@ndtvindia
ಹೊಸದಿಲ್ಲಿ: ಜುಲೈ 11ರಂದು ಕನ್ವರ್ ಯಾತ್ರೆ ಪ್ರಾರಂಭವಾಗಿತ್ತು. ಇದಾದ ಕೇವಲ ಐದು ದಿನಗಳಲ್ಲಿ 170ಕ್ಕೂ ಹೆಚ್ಚು ಕನ್ವಾರಿಯಾ ಯಾತ್ರಿಕರ ವಿರುದ್ಧ ವಿವಿಧ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು thewire ವರದಿ ಮಾಡಿದೆ.
170ಕ್ಕೂ ಅಧಿಕ ಕನ್ವಾರಿಯಾ ಯಾತ್ರಿಕರ ವಿರುದ್ಧ ಗೂಂಡಾಗಿರಿ, ಗಲಭೆ, ಹೆದ್ದಾರಿ ತಡೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಶಾಂತಿ ಭಂಗ ಸೇರಿದಂತೆ ವಿವಿಧ ಆರೋಪಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವರದಿಯು ತಿಳಿಸಿದೆ.
ಕನ್ವರ್ ಯಾತ್ರೆಯ ಸಮಯದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆಗಳ ಬಳಿಕ ʼಅಖಿಲ ಭಾರತೀಯ ಅಖಾಡ ಪರಿಷತ್ʼ (ABAP) ಯಾತ್ರಿಕರಿಗೆ ಶಾಂತಿಯುತವಾಗಿ ನಡೆದುಕೊಳ್ಳಬೇಕು. ಶತಮಾನಗಳಷ್ಟು ಹಳೆಯದಾದ ಯಾತ್ರೆಯ ಆಧ್ಯಾತ್ಮಿಕ ಪಾವಿತ್ರ್ಯವನ್ನು ಕಾಪಾಡಬೇಕು ಎಂದು ಮನವಿ ಮಾಡಿದೆ.
ʼಕನ್ವರ್ ಯಾತ್ರೆ ಒಂದು ಪವಿತ್ರ ಯಾತ್ರೆ, ಇದು ಕೇವಲ ಪ್ರಯಾಣವಲ್ಲ. ತ್ರೇತಾಯುಗದಲ್ಲಿ ಭಗವಾನ್ ಪರಶುರಾಮರು ಹರಿದ್ವಾರದಿಂದ ಮೊದಲ ಬಾರಿಗೆ ಕನ್ವರ್ ತಂದರು ಎಂಬ ನಂಬಿಕೆ ಇದೆ. ಶ್ರವಣ ಕುಮಾರ್ ತನ್ನ ತಾಯಿ ಮತ್ತು ತಂದೆಯನ್ನು ಕನ್ವರ್ ಮೇಲೆ ಹೊತ್ತು ಸೇವೆ ಮಾಡಿದ ಕಥೆಯೂ ಇದೆ. ಈ ಯಾತ್ರೆ ಸೇವೆ, ತ್ಯಾಗ ಮತ್ತು ಭಕ್ತಿಯ ಪ್ರತಿಬಿಂಬವಾಗಿದೆ. ಕನ್ವಾರಿಯಾ ಯಾತ್ರಿಕರು ಈ ಯಾತ್ರೆಯ ಧಾರ್ಮಿಕ ಮಹತ್ವವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಯಾತ್ರೆಯು ತಪಸ್ಸಿಗಾಗಿ ಇರುವುದಾಗಿದೆ. ಆಕ್ರಮಣ ಮತ್ತು ಅವ್ಯವಸ್ಥೆ ಸೃಷ್ಟಿಸುವುದಕ್ಕಲ್ಲ ಎಂಬುದನ್ನು ಯಾತ್ರಿಕರು ನೆನಪಿನಲ್ಲಿಟ್ಟುಕೊಳ್ಳಬೇಕುʼ ಎಂದು ABAP ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಯಾತ್ರಿಕರಿಗೆ ಮನವಿ ಮಾಡಿದ್ದಾರೆ.







