ಸನ್ನಿವೇಶಕ್ಕೆ ಕೋಮುಬಣ್ಣ ಬಳಿಯುತ್ತಿರುವ ಪಾಕ್: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ

ವಿಕ್ರಮ್ ಮಿಸ್ರಿ | PC : PTI
ಹೊಸದಿಲ್ಲಿ: ಪಾಕಿಸ್ತಾನವು ನಿರ್ದಿಷ್ಟ ಆರಾಧನಾ ಸ್ಥಳಗಳನ್ನು ಗುರಿಯಿರಿಸಿ ದಾಳಿ ನಡೆಸುವ ಮೂಲಕ ನೀಚಮಟ್ಟಕ್ಕಿಳಿದಿದೆಯೆಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
‘‘ಪೂಂಚ್ನಲ್ಲಿರುವ ಗುರುದ್ವಾರದ ಮೇಲೆ ಪಾಕಿಸ್ತಾನವು ದಾಳಿ ನಡೆಸಿದೆ. ಈ ಘಟನೆಯಲ್ಲಿ ಕೆಲವು ಸ್ಥಳೀಯ ಸಿಖ್ಖ್ ಸಮುದಾಯದ ಸದಸ್ಯರು ಸಾವನ್ನಪ್ಪಿದ್ದಾರೆ. ಭಾರತವು ಪೂಂಚ್ನ ನಾನ್ಖಾನಾ ಸಾಹಿಬ್ ಗುರುದ್ವಾರದ ಮೇಲೆ ದಾಳಿ ನಡೆಸಿದೆಯೆಂಬ ಸುಳ್ಳುಮಾಹಿತಿಯನ್ನು ಹರಡುತ್ತಿದೆ. ಇದು ಪಾಕಿಸ್ತಾನದ ಅಪಪ್ರಚಾರ ಅಭಿಯಾನದ ಭಾಗವಾಗಿದೆಯೆಂದು ಮಿಸ್ರಿ ತಿಳಿಸಿದರು.
ಹತಾಶವಾಗಿರುವ ಪಾಕಿಸ್ತಾನವು ಕೋಮು ವೈಷಮ್ಯವನ್ನು ಸೃಷ್ಟಿಸುವ ಉದ್ದೇಶದಿಂದ ಪರಿಸ್ಥಿತಿಗೆ ಕೋಮುಬಣ್ಣ ಬಳಿಯಲು ಯತ್ನಿಸುತ್ತಿದೆ ಎಂದರು.
ಭಾರತದ ವಾಯುಕ್ಷೇತ್ರವನ್ನು ಉಲ್ಲಂಘಿಸಲು ಪಾಕಿಸ್ತಾನ ನಡೆಸಿದ ಯತ್ನಗಳಿಗೆ ಭಾರತವು ಸೂಕ್ತ ಉತ್ತರವನ್ನು ನೀಡಿದೆಯೆಂದು ಅವರು ಹೇಳಿದರು.
ಭಾರತದ ಜಮ್ಮು, ಪಠಾಣ್ಕೋಟ್, ಉಧಂಪುರ ಮತ್ತಿತರ ಸ್ಥಳಗಳಲ್ಲಿ ಭಾರತದ ಸೇನಾ ಠಾಣೆಗಳ ಮೇಲೆ ದಾಳಿ ನಡೆಸುವ ಪಾಕಿಸ್ತಾನ ಸೇನಾಪಡೆಯ ಪ್ರಯತ್ನವನ್ನು ಗುರುವಾರ ರಾತ್ರಿ ವಿಫಲಗೊಳಿಸಿದೆಯೆಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮುವಿನ ಸತ್ವಾರಿ, ಸಾಂಬಾ, ಆರ್.ಎಸ್.ಪುರಾ ಹಾಗೂ ಆರ್ನಿಯಾ ಪಟ್ಟಣಗಳಲ್ಲಿ ಪಾಕಿಸ್ತಾನವು ನಡೆಸಿದ ಕ್ಷಿಪಣಿ ದಾಳಿಗಳನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆ ತಡೆಗಟ್ಟಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
►ಜೈಸಲ್ಮೇರ್, ಶ್ರೀನಗರದಲ್ಲಿ ದಾಳಿಯನ್ನೇ ನಡೆಸಿಲ್ಲ ಎಂದ ಪಾಕ್ !
ಈ ಮಧ್ಯೆ ಪಾಕಿಸ್ತಾನ ಸರಕಾರವು ಹೇಳಿಕೆಯೊಂದನ್ನು ನೀಡಿ, ಪಠಾಣ್ಕೋಟ್, ಜೈಸಲ್ಮೇರ್ ಹಾಗೂ ಶ್ರೀನಗರದಲ್ಲಿ ಪಾಕ್ ಸೇನೆಯು ದಾಳಿಗಳನ್ನು ನಡೆಸಿದೆಯೆಂಬ ಭಾರತೀಯ ಮಾಧ್ಯಮಗಳು ಆಧಾರರಹಿತ ಹಾಗೂ ಬೇಜವಾಬ್ದಾರಿಯುತ ಆರೋಪಗಳನ್ನು ಹರಡುತ್ತಿವೆ ಎಂದು ಆಪಾದಿಸಿದೆ. ಈ ಆರೋಪಗಳು ನಿರಾಧಾರವಾದವು, ರಾಜಕೀಯ ಪ್ರೇರಿತ ಹಾಗೂ ಪಾಕಿಸ್ತಾನಕ್ಕೆ ಕಳಂಕ ಹಚ್ಚುವ ಉದ್ದೇಶದಿಂದ ನಡೆಸಲಾದ ಅಪಪ್ರಚಾರವೆಂದು ಅದು ಹೇಳಿದೆ.
ಇಂತಹ ಕೃತ್ಯಗಳು ಪ್ರಾದೇಶಿಕ ಶಾಂತಿಗೆ ಅಪಾಯವುಂಟು ಮಾಡಿರುವುದು ಮಾತ್ರವಲ್ಲದೆ ರಾಜಕೀಯ ಹಾಗೂ ಸೇನಾ ದುರುದ್ದೇಶಗಳಿಗೆ ಸುಳ್ಳು ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತಿದೆಯೆಂದ ಅದು ಹೇಳಿದೆ.
ಈ ಅಪಾಯಕಾರಿ ಪ್ರವೃತ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಪಾಕಿಸ್ತಾನವು ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಇದೆ ಹಾಗೂ ಭಾರತವು ಸಂಯಮ ಹಾಗೂ ಜವಾಬ್ದಾರಿಯಿಂದ ವರ್ತಿಸುವಂತೆ ಮಾಡಲು ಅದರ ಜೊತೆ ಸಮಾಲೋಚನೆ ನಡೆಸಬೇಕೆದು ಕೋರಿದೆ.