ಭಾರತದ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಯತ್ನಿಸಿದ ಪಾಕ್ : ಮಾಹಿತಿ ನೀಡಿದ ಭಾರತೀಯ ಸೇನೆ
ಮಿಶ್ರಿ, ಖುರೇಷಿ, ವ್ಯೋಮಿಕಾ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ

Photo credit: PTI
ಹೊಸದಿಲ್ಲಿ: ಪಾಕ್ ಭಾರತದ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಯತ್ನಿಸಿದೆ. ಶುಕ್ರವಾರ ರಾತ್ರಿ ಉಧಮ್ಪುರ, ಪಠಾಣ್ಕೋಟ್ ಮತ್ತು ಬಟಿಂಡಾದಲ್ಲಿನ ಭಾರತೀಯ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಆಪರೇಷನ್ ಸಿಂಧೂರ ಕುರಿತ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆ ಮಾಹಿತಿ ನೀಡಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಪಾಕಿಸ್ತಾನ ಸೇನೆಯು ಪ್ರಚೋದನೆಯನ್ನುಂಟು ಮಾಡಿದೆ. ಅದಕ್ಕೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದ ಪಶ್ಚಿಮ ಭಾಗದ ಮೇಲೆ ದಾಳಿ ಮಾಡಲು ಪಾಕಿಸ್ತಾನ ಸೇನೆಯು ಡ್ರೋನ್ಗಳು ಮತ್ತು ಇತರ ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳನ್ನು ಬಳಸಿದೆ. 26 ಭಾರತೀಯ ನಗರಗಳನ್ನು ಗುರಿಯಾಗಿಸಿ ದಾಳಿಗೆ ಯತ್ನಿಸಲಾಗಿದೆ. ಅದರಲ್ಲಿ ಹೆಚ್ಚಿನ ದಾಳಿಗಳನ್ನು ಭಾರತ ಯಶಸ್ವಿಯಾಗಿ ವಿಫಲಗೊಳಿಸಿದೆ ಎಂದು ಹೇಳಿದರು.
ಕರ್ನಲ್ ಸೋಫಿಯಾ ಖುರೇಷಿ ಮಾತನಾಡಿ, ಪಾಕಿಸ್ತಾನ ಶ್ರೀನಗರ, ಅವಂತಿಪುರ ಮತ್ತು ಉಧಂಪುರಗಳಲ್ಲಿನ ವೈದ್ಯಕೀಯ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಪಂಜಾಬ್ನಲ್ಲಿರುವ ವಾಯುನೆಲೆಯ ಮೇಲೆ ದಾಳಿ ಮಾಡಲು ಪಾಕಿಸ್ತಾನ ಪ್ರಯತ್ನಿಸಿದೆ. ಪಾಕ್ ಸೇನೆಯು ಮುಂಚೂಣಿ ಪ್ರದೇಶಗಳಿಗೆ ಸೈನ್ಯವನ್ನು ಸ್ಥಳಾಂತರಿಸುತ್ತಿದೆ ಎಂದು ಹೇಳಿದರು.