ಭಾರತದ ವಿರುದ್ಧ ಎಫ್-16 ಬಳಸುವ ಮೂಲಕ ಒಪ್ಪಂದ ಉಲ್ಲಂಘಿಸಿದ ಪಾಕಿಸ್ತಾನ: ಪ್ರಕಾಶ್ ಅಂಬೇಡ್ಕರ್
ಅಮೆರಿಕದ ಜೊತೆ ವಿಷಯ ಪ್ರಸ್ತಾಪಿಸುವಂತೆ ಕೇಂದ್ರಕ್ಕೆ ಆಗ್ರಹ

PC : NDTV
ಮುಂಬೈ : ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನವು ಎಫ್-16 ಫೈಟರ್ ಜೆಟ್ ವಿಮಾನಗಳನ್ನು ಬಳಸಿರುವ ವಿಷಯವನ್ನು ಅಮೆರಿಕದ ಮುಂದಿಡಬೇಕೆಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ, ಹಿರಿಯ ರಾಜಕಾರಣಿ ಪ್ರಕಾಶ್ ಅಂಬೇಡ್ಕರ್ ಅವರು ಕೇಂದ್ರ ಸರಕಾರವನ್ನು ಶುಕ್ರವಾರ ಆಗ್ರಹಿಸಿದ್ದಾರೆ.
ಭಾರತದ ಜೊತೆಗಿನ ಸಂಘರ್ಷದಲ್ಲಿ ಪಾಕಿಸ್ತಾನದ ವಾಯುಪಡೆಯು ಸೂಪರ್ ಸೋನಿಕ್ ಮಲ್ಟಿರೋಲ್ ಫೈಟರ್ ವಿಮಾನವನ್ನು ಬಳಸಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.
‘‘ಅಮೆರಿಕವು ಪಾಕಿಸ್ತಾನಕ್ಕೆ ಕೆಲವೊಂದು ನಿರ್ಬಂಧಗಳೊಂದಿಗೆ ಎಫ್-16 ಯುದ್ಧ ವಿಮಾನಗಳನ್ನು ನೀಡಿತ್ತು. ಭಾರತದ ವಿರುದ್ಧ ಆಕ್ರಮಣಕ್ಕೆ ಎಫ್-16 ವಿಮಾನಗಳನ್ನು ಬಳಸಬಾರದೆಂಬ ಶರತ್ತನ್ನು ವಿಧಿಸಿತ್ತು’’ ಎಂದು ವಂಚಿತ್ ಬಹುಜನ ಅಘಾಡಿ ಪಕ್ಷದ ನಾಯಕರೂ ಆದ ಪ್ರಕಾಶ್ ಅಂಬೇಡ್ಕಕರ್ ತಿಳಿಸಿದ್ದಾರೆ.
‘‘ಪಾಕಿಸ್ತಾನವು ಭಾರತದ ವಿರುದ್ಧ ಕಾರ್ಯಾಚರಣೆಗೆ ಎಫ್-16 ವಿಮಾನಗಳನ್ನು ಬಳಸಿಕೊಂಡಿದೆ. ಇದು ಶರತ್ತಿನ ಸಂಪೂರ್ಣ ಉಲ್ಲಂಘನೆಯಾದೆ. ಪಾಕಿಸ್ತಾನವನ್ನು ಹಾಗೂ ಅದರ ದುಷ್ಟ ಉದ್ದೇಶಗಳನ್ನು ಈಗ ಭಾರತವು ಇಡೀ ಜಗತ್ತಿನ ಮುಂದೆ ಬಯಲಿಗೆಳೆಯಬೇಕಾಗಿದೆ ’’ಎಂದರು.
ಪಾಕಿಸ್ತಾನವು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಯನ್ನು ಹರಡುತ್ತಿದೆ ಹಾಗೂ ಭಾರತೀಯ ವಾಯುಪಡೆಯ ರಾಫೆಲ್ ಜೆಟ್ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಳ್ಳುತ್ತಿದೆ. ಭಾರತೀಯ ಸಶಸ್ತ್ರ ಪಡೆಗಳನೈತಿಕಸ್ಥೈರ್ಯವನ್ನು ಉತ್ತೇಜಿಸಲು ಕೇಂದ್ರ ಸರಕಾರವು ಪಾಕಿಸ್ತಾನವು ಹರಡುತ್ತಿರುವ ಇಂತಹ ಸುಳ್ಳುಗಳನ್ನು ಹಾಗೂ ಹುಸಿ ಪ್ರತಿಪಾದನೆಗಳನ್ನು ಬಯಲಿಗೆಳೆಯಬೇಕು ಎಂದು ಅವರು ಹೇಳಿದರು.
ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಹಾಗೂ ಅದನ್ನು ಪ್ರಾದೇಶಿಕವಾಗಿ ಮತ್ತು ಆರ್ಥಿಕವಾಗಿ ಏಕಾಂಗಿಯಾಗಿಸಬೇಕು. ಒಂದು ವೇಳೆ ಪಾಕಿಸ್ತಾನವು ಪರಿಸ್ಥಿತಿಯನ್ನು ಬಿಗಡಾಯಿಸಲು ಮುಂದಾದಲ್ಲಿ, ಅದಕ್ಕೆ ಬಲವಾದ ಉತ್ತರವನ್ನು ನೀಡಲು ಭಾರತವು ಹಿಂದುಮುಂದೆ ನೋಡಬಾರದು’’ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದರು.
ಪ್ರಕಾಶ್ ಅಂಬೇಡ್ಕರ್ ಅವರು ಎರಡು ಬಾರಿ ಲೋಕಸಭಾ ಸದಸ್ಯರಾಗಿ ಮತ್ತು ಇನ್ನೊಂದು ಸಲ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.